ಮಂಡ್ಯ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆಯನ್ನೇ ಛಿದ್ರ ಮಾಡಿದ ನಂತರ ಕಾಂಗ್ರೆಸ್ ಪಕ್ಷವು ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ (ಮನ್ಮುಲ್) ವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಮೂಲಕ ವಿಜಯ ಸಾಧಿಸಿದೆ.
ಸೋಮವಾರ (ಜುಲೈ 24) ನಡೆದ ಮನ್ಮುಲ್ ಅಧ್ಯಕ್ಷ ಚುನಾವಣೆಯಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನ ನಿರ್ದೇಶಕ ಕಾಂಗ್ರೆಸ್ನ ಬೋರೇಗೌಡ ಮನ್ಮುಲ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ನಾಲ್ವರು ಅಧಿಕಾರಿಗಳ ಜೊತೆಗೆ ಓರ್ವ ಬಿಜೆಪಿ ಬೆಂಬಲಿತ ನಿರ್ದೇಶಕ ಎಸ್.ಪಿ ಸ್ವಾಮಿ ನೆರವಿನಿಂದ ಅಧಿಕಾರ ಹಿಡಿಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಯಿತು.
ಮನ್ಮುಲ್ ಅಧ್ಯಕ್ಷ ಚುನಾವಣೆಯಲ್ಲಿ ಗೆಲ್ಲಲು 9 ಮತಗಳ ಅವಶ್ಯಕತೆ ಇತ್ತು. ಈ ಪೈಕಿ ಕಾಂಗ್ರೆಸ್ ತನ್ನ ಪಕ್ಷದ ನಿರ್ದೇಶಕರು, ಓರ್ವ ನಾಮನಿರ್ದೇಶಿತ ಸದಸ್ಯ ಹಾಗೂ ನಾಲ್ವರು ಅಧಿಕಾರಿಗಳ ಬೆಂಬಲದ ಜೊತೆಗೆ ಬಿಜೆಪಿ ಬೆಂಬಲಿತ ನಿರ್ದೇಶಕ ಎಸ್.ಪಿ. ಸ್ವಾಮಿಯ ನೆರವಿನಿಂದ ಗೆಲವು ಸಾಧಿಸಿತು. ಕೋರಂ ಅಭಾವ ಉಂಟಾಗಲಿ ಎಂದು ಇಂದೂ ಸಹ ಚುನಾವಣೆ ಪ್ರಕ್ರಿಯೆಗೆ ಜೆಡಿಎಸ್ ಬೆಂಬಲಿತ ನಿರ್ದೇಶಕರು ಗೈರಾಗಿದ್ದರು. ಆದರೆ ಜೆಡಿಎಸ್ ತಂತ್ರಕ್ಕೆ ಪ್ರತಿತಂತ್ರ ರೂಪಿಸಿದ ಕಾಂಗ್ರೆಸ್ ಅದರಲ್ಲಿ ಯಶಸ್ವಿಯಾಗಿದೆ.
ಮನ್ಮುಲ್ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್, ಜೆಡಿಎಸ್ ಪೈಪೋಟಿ ನಡೆಸಿದ್ದವು, 2 ಪಕ್ಷಗಳಿಗೂ ಬಿಜೆಪಿ ಬೆಂಬಲಿತರ ನಿರ್ದೇಶಕರ ಬೆಂಬಲ ಅನಿವಾರ್ಯವಾಗಿತ್ತು. ಆದರೆ ಅಂತಿಮವಾಗಿ ಬಿಜೆಪಿ ಬೆಂಬಲಿತ ನಿರ್ದೇಶಕರೊಬ್ಬರು ಕಾಂಗ್ರೆಸ್ ಕೈ ಹಿಡಿದು ಎಲ್ಲಾ ಲೆಕ್ಕಚಾರವನ್ನು ತಲೆಕೆಳಗಾಗಿಸಿದರು.
ಇಂದೂ ಕೂಡ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಬೆಂಬಲಿತ ಇಬ್ಬರು ನಿರ್ದೇಶಕರಾದ ಬಿ.ಆರ್.ರಾಮಚಂದ್ರು ಹಾಗೂ ವಿಶ್ವನಾಥ್ ಅವರನ್ನು ಅಮಾನತ್ತುಗೊಳಿಸಲಾಗಿತ್ತು. ಇದರಿಂದಾಗಿ ಜೆಡಿಎಸ್ ಬೆಂಬಲಿತ ನಿರ್ದೇಶಕರ ಸಂಖ್ಯೆ 5 ಕುಸಿಯಿತು, ಈ ಐವರು ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿದರು. ಬಿಜೆಪಿ ಬೆಂಬಲಿತ ಇಬ್ಬರು ನಿರ್ದೇಶಕರ ಪೈಕಿ ರೂಪ ಅವರು ಜೆಡಿಎಸ್ ಅನ್ನು ಬೆಂಬಲಿಸಿದರೆ, ಮತ್ತೊಬ್ಬ ನಿರ್ದೇಶಕ ಎಸ್ಪಿ ಸ್ವಾಮಿ ಕಾಂಗ್ರೆಸ್ ಅನ್ನು ಬೆಂಬಲಿಸಿದರು. ಒಟ್ಟಾರೆಯಾಗಿ ನಾಲ್ವರು ಅಧಿಕಾರಿಗಳು, ಮೂವರು ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಹಾಗೂ ಓರ್ವ ಬಿಜೆಪಿ ಬೆಂಬಲಿತ ನಿರ್ದೇಶಕ ಬಲದಿಂದಾಗಿ ಕಾಂಗ್ರೆಸ್ ಚುನಾವಣೆಯಲ್ಲಿ ಜಯಗಳಿಸಿ, ಮನ್ ಮುಲ್ ಅಧ್ಯಕ್ಷಗಿರಿಯನ್ನು ವಶಕ್ಕೆ ಪಡೆಯಿತು. ಚುನಾವಣಾಧಿಕಾರಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ಶಾಸಕ ರಮೇಶ್ ಬಾಬು, ಮನ್ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧತ್ ನೂತನ ಅಧ್ಯಕ್ಷನ್ನು ಅಭಿನಂದಿಸಿದರು.