Thursday, September 19, 2024

ಪ್ರಾಯೋಗಿಕ ಆವೃತ್ತಿ

ನನ್ನ ಮೇಲೆ ಹಲ್ಲೆ ನಡೆದಿಲ್ಲ : ಚಂದ್ರುಕುಮಾರ್

ಮಾಜಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಜೆಡಿಎಸ್ ನಾಯಕರು ಮಾಡಿರುವ ಆರೋಪ ಸಂಪೂರ್ಣ ಸುಳ್ಳು. ನನ್ನ ಮೇಲೆ ಯಾವುದೇ ಹಲ್ಲೆ ನಡೆದಿಲ್ಲವೆಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂದ್ರಕುಮಾರ್ ಸ್ವಷ್ಟಪಡಿಸಿದರು.

ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ರಾಜಕೀಯ ಲಾಭ ಪಡೆಯಲು ಜೆಡಿಎಸ್ ಮುಖಂಡರು ಕುರುಬ ಸಮುದಾಯದ ಮುಖಂಡರ ಮೇಲೆ ನರೇಂದ್ರಸ್ವಾಮಿ ಅವರು ಹಲ್ಲೆ ಮಾಡಿದ್ದಾರೆಂದು ಸುಳ್ಳು ಹೇಳಿಕೆ ನೀಡುವುದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರದಲ್ಲಿ ತೊಡಗಿದ್ದಾರೆ. ತನ್ನ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಳವಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ಸ್ವಾಗತಿಸಲು ಹೋಗುವ ಸಂದರ್ಭದಲ್ಲಿ ಸ್ವಲ್ಪ ನೂಕಾಟ ಆಯಿತು. ಅದನ್ನೇ ಹಲ್ಲೆ ಮಾಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಕುರುಬ ಸಮುದಾಯದ ಮತಗಳನ್ನು ಒಡೆಯುವ ಉದ್ದೇಶವನ್ನಿಟ್ಟುಕೊಂಡು ಕಾಂಗ್ರೆಸ್ ನಾಯಕರು ಹಲ್ಲೆ ಮಾಡಿದ್ದಾರೆಂದು ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.

ಕಲ್ಲಾರೇಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನರೇಂದ್ರಸ್ವಾಮಿ ಅವರ ಜೊತೆಯಲ್ಲಿಯೇ ವೇದಿಕೆ ಹಂಚಿಕೊಂಡು ಪರಸ್ಪರ ಮಾತನಾಡಿದ್ದೇವೆ, ಜೆಡಿಎಸ್ ಮುಖಂಡರು ಮಾಡಿದ ಆರೋಪಕ್ಕೆ ಯಾರು ಕಿವಿಕೊಡಬಾರದೆಂದು ಮನವಿ ಮಾಡಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಿಕ್ಕಲಿಂಗಯ್ಯ ಮಾತನಾಡಿ, ಕುರುಬ ಸಮುದಾಯದ ನಾಯಕ ಸಿದ್ದರಾಮಯ್ಯ ಅವರು ಮಳವಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ಸ್ವಾಗತಿಸಲು ಬಾರದವರಿಗೆ ಈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ.

ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ದೊಡ್ಡಯ್ಯ ಕಾಂಗ್ರೆಸ್‌ನಲ್ಲಿದ್ದು ಕೊಂಡು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಹಣಕ್ಕಾಗಿ ಜೆಡಿಎಸ್ ಪಕ್ಷಕ್ಕೆ ಮತ ಹಾಕಿದ್ದಾರೆ. ಹಣ, ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ, ಅವರ ಮಾತನ್ನು ಯಾರು ನಂಬಬೇಡಿ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಬಂಕ್ ಮಹದೇವು ಮಾತನಾಡಿ, ಕುರುಬ ಸಮುದಾಯದಲ್ಲಿ ಗೊಂದಲ ಸೃಷ್ಠಿಸಲು ಅಪಪ್ರಚಾರ ಮಾಡಲಾಗುತ್ತಿದೆ, ರಾಜಕೀಯ ಲಾಭ ಪಡೆಯಲು ಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ, ಮಾಜಿ ಸಚಿವ ಪಿ.ಎಂ ನರೇಂದ್ರಸ್ವಾಮಿ ಅವರು ಯಾರ ಮೇಲೂ ಹಲ್ಲೆ ಮಾಡಿಲ್ಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಲಿಕಾಪ್ಟರ್‌ನಲ್ಲಿ ಆಗಮಿಸಿದಾಗ ಸ್ವಾಗತಿಸಲು ಹೋದ ಸಂದರ್ಭದಲ್ಲಿ ನೂಕಾಟ ನಡೆಯಿತು, ಇದನ್ನೆ ಬಂಡವಾಳ ಮಾಡಿಕೊಂಡಿರುವ ಕುರುಬ ಸಮುದಾಯದ ಜೆಡಿಎಸ್ ನಾಯಕರು ಜನರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡಿದ್ದಾರೆಂದು ದೂರಿದರು.

ಇದೇ ಸಂದರ್ಭದಲ್ಲಿ ಚನ್ನಪಿಳ್ಳೇಕೊಪ್ಪಲು ಸಿದ್ದೇಗೌಡ, ಮಹದೇವಯ್ಯ,ಬಂಡೂರು ಗ್ರಾಮಪಂಚಾಯಿತಿ ಸದಸ್ಯ ಓಂಪ್ರಕಾಶ್ ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!