ಮದ್ದೂರು ತಾಲ್ಲೂಕು ಎಚ್. ಹೊಸೂರು ಗ್ರಾಮದಲ್ಲಿ 25 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ವಿವಾದ ಕೊನೆಗೂ ಇತ್ಯರ್ಥವಾಗಿದೆ. ಒತ್ತುವರಿಯಿಂದ ಅಭಿವೃದ್ದಿ ಕಾಣದೆ ನೆನೆಗುದಿಗೆ ಬಿದ್ದಿದ್ದ ರಸ್ತೆಯೊಂದರ ವಿವಾದವನ್ನ ನಿವೃತ್ತ ಇಂಜಿನಿಯರೊಬ್ಬರು ಬಗೆಹರಿಸಿ ರಸ್ತೆಯನ್ನು ಅಭಿವೃದ್ದಿ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ 25 ವರ್ಷಗಳಿಂದ ಮದ್ದೂರು ತಾಲ್ಲೂಕು ಎಚ್.ಹೊಸೂರು ಗ್ರಾಮದಲ್ಲಿ ಕೆಲವರು ಒತ್ತುವರಿ ಮಾಡಿಕೊಂಡು ರಸ್ತೆಗೆ ಬೇಲಿ ಹಾಕಿಕೊಂಡಿದ್ದರು. ಈ ಬಗ್ಗೆ ಸಾಕಷ್ಟು ವಿವಾದ ಉಂಟಾಗಿತ್ತು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತು. ಆದರೂ ರಸ್ತೆಯ ಅಭಿವೃದ್ದಿ ಮಾತ್ರ ಆಗಿರಲಿಲ್ಲ.
ನಿವೃತ್ತ ಕಾರ್ಯಪಾಲಕ ಅಭಿಯಂತರ ಕೆ.ಬಸವರಾಜೇಗೌಡ ಅವರಿಗೆ ಗ್ರಾಮಸ್ಥರು ರಸ್ತೆ ವಿವಾದ ಬಗೆಹರಿಸುವಂತೆ ಮನವಿ ಮಾಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಬಸವರಾಜೇಗೌಡ ಅವರು 2 ಪಕ್ಷಗಾರರನ್ನ ಕರೆಸಿ ಚರ್ಚೆ ನಡೆಸಿ ಎಲ್ಲರನ್ನು ಮನವೊಲಿಸುವಲ್ಲಿ ಸಫಲರಾದರು. ಬಳಿಕ ರಸ್ತೆ ಒತ್ತುವರಿಯನ್ನ ಎಲ್ಲರೂ ಮನಪೂರ್ವಕವಾಗಿ ಒಪ್ಪಿ ಬಸವರಾಜೇಗೌಡ ಅವರ ಮಾತಿಗೆ ಮನ್ನಣೆ ನೀಡಿ ತೆರವುಗೊಳಿಸಿದರು. ತಕ್ಷಣ ಕಾರ್ಯ ಪ್ರವೃತ್ತರಾದ ಬಸವರಾಜೇಗೌಡ, ಗ್ರಾಮದ ಮುಖಂಡರು ತಮಗೆ ಆಪ್ತರಾಗಿದ್ದ ಕೆಲ ಗುತ್ತಿಗೆದಾರರ ಸಹಕಾರದಿಂದ ರಸ್ತೆಗೆ ಮಣ್ಣು ಜೆಲ್ಲಿ ತರಿಸಿ ಅಭಿವೃದ್ದಿ ಪಡಿಸುವಲ್ಲಿ ಮುಂಚೂಣಿ ಪಾತ್ರ ವಹಿಸಿದರು.
ರಸ್ತೆ ಅಭಿವೃದ್ದಿಗೊಂಡ ಬಳಿಕ ವಿವಾದ ಉಂಟು ಮಾಡಿದ್ದ ಕೆಲವರು ಹಾಗೂ ಗ್ರಾಮಸ್ಥರ ಮೊಗದಲ್ಲಿ ನಗೆಯ ಚಿಲುಮೆ ಹರಿಯಿತು. ಒಟ್ಟಾರೆ ವಿವಾದಕ್ಕೀಡಾಗಿದ್ದ ರಸ್ತೆ ತೆರವುಗೊಂಡು ಅಭಿವೃದ್ದಿ ಕಂಡಿದ್ದು ಕೆಲವರು ನಿಟ್ಟುಸಿರು ಬಿಡುವಂತೆ ಮಾಡಿತು.
ಈ ಸಂದರ್ಭದಲ್ಲಿ ಮುಖಂಡರಾದ ಹಾಗಲಹಳ್ಳಿ ಪುಟ್ಟಸ್ವಾಮಿಗೌಡ, ವಿಶ್ವನಾಥ್, ಶೇಖರ್, ರಮೇಶ್, ಎಚ್.ಕೆ.ಪ್ರಭು, ಮುಡೀನಹಳ್ಳಿ ಅಪ್ಪಾಜಿ, ಎಚ್.ಹೊಸೂರು ಗ್ರಾಮದ ಮಹೇಶ್, ನಾರಾಯಣ್, ನಾಗಣ್ಣ, ಕರಿಯಪ್ಪ, ನಾಗರಾಜು, ಉಮೇಶ್, ಈರಪ್ಪ, ಶೇಖರ್, ಅನಿಲ್ ಕುಮಾರ್ ಇವರ ಸಮ್ಮುಖದಲ್ಲಿ ರಸ್ತೆ ವಿವಾದದ ಕಗ್ಗಂಟು ಇತ್ಯರ್ಥಗೊಂಡಿತು.