ವರದಿ: ಅಣ್ಣೂರು ಸತೀಶ್
ಸರ್ಕಾರವು ಕೆಎಂಎಫ್ ಮಾದರಿಯಲ್ಲೇ ತೆಂಗು ಅಭಿವೃದ್ದಿ ಮಂಡಳಿಯನ್ನು ಅಭಿವೃದ್ದಿಗೊಳಿಸಲು ಮುಂದಾಗಬೇಕೆಂದು ಶಾಸಕ ಹಾಗೂ ಆತ್ಮಲಿಂಗೇಶ್ವರ ತೆಂಗು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಮಧು ಜಿ.ಮಾದೇಗೌಡ ಹೇಳಿದರು.
ಮದ್ದೂರು ತಾಲ್ಲೂಕಿನ ಭಾರತೀನಗರದ ಭಾರತೀ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ತೆಂಗು ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆಎಂಎಫ್ ರಾಜ್ಯದಲ್ಲೇ ಅಭಿವೃದ್ದಿ ಕಂಡಿದೆ. ಅದೇ ಮಾದರಿಯಲ್ಲಿ ತೆಂಗು ಬೆಳೆ ಅಭಿವೃದ್ದಿಗೂ ಸರ್ಕಾರ ಪ್ರೋತ್ಸಾಹ ನೀಡಿದರೆ ರೈತರು ಆರ್ಥಿಕ ಸಮಸ್ಯೆಯಿಂದ ಹೊರಬಹುದೆಂದರು.
ಕೆಎಂಎಫ್ ಹಲವಾರು ಉಪ ಉತ್ಪನ್ನಗಳನ್ನು ಮಾಡಿ, ಲಾಭದಾಯಕವಾಗಿದೆ. ಹಾಗೆಯೇ ತೆಂಗು ಬೆಳೆಯಿಂದಲೂ ಹಲವಾರು ಉತ್ಪನ್ನಗಳನ್ನು ಮಾಡಬಹುದು. ಮಂಡ್ಯ ಜಿಲ್ಲೆಯ ಜನರು ತೆಂಗು ಬೆಳೆಯನ್ನೇ ನಂಬಿ ಬದುಕುತ್ತಿದ್ದಾರೆ. ತೆಂಗು ಬೆಳೆಯಲ್ಲಿ ಭತ್ತ, ರಾಗಿ, ಕಬ್ಬು, ತರಕಾರಿ ಸೇರಿದಂತೆ ಇನ್ನಿತರೆ ವ್ಯವಸಾಯವನ್ನು ಮಾಡಿಕೊಂಡು ಬಂದಿದ್ದಾರೆ. ತೆಂಗು ಬೆಳೆಯಿಂದ ರೈತರು ಆದಾಯವನ್ನು ಸಹ ಕಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಪ್ಪುತಲೆ ಹುಳುಬಾಧೆಯಿಂದ ತೆಂಗಿನ ಮರಗಳು ನಾಶಗೊಂಡಿವೆ. ಕೃಷಿ ಇಲಾಖೆ ರೈತರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಕೃಷಿಗಳ ಬದುಕಿಗೆ ಪೂರಕವಾಗಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ತೆಂಗು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಿ.ಎಂ.ನಂಜೇಗೌಡ ಮಾತನಾಡಿ, ಮಂಡ್ಯ ಜಿಲ್ಲೆಯ ಮದ್ದೂರಿನ ಎಳನೀರು ಮಾರುಕಟ್ಟೆ ಏಷ್ಯಖಂಡದಲ್ಲೇ ಅತೀ ದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಜಿಲ್ಲೆಯಲ್ಲಿ ರೈತರು ತೆಂಗುಬೆಳೆಯನ್ನೇ ಅವಲಂಬಿಸಿದ್ದಾರೆ. ಎಳನೀರು ವ್ಯಾಪಾರದಿಂದ ಸಾಕಷ್ಟು ಮಂದಿ ಆರ್ಥಿಕ ಸಮಸ್ಯೆಯಿಂದ ಹೊರ ಬಂದಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಉದ್ಯೋಗವು ಸಹ ಲಭಿಸಿದೆ ಎಂದರು.
ಇದೇ ವೇಳೆ ರೈತರಿಗೆ ಹೆಚ್ಚಿನ ಮಾಹಿತಿ ನೀಡಲು ಏರ್ಪಡಿಸಲಾಗಿದ್ದ ಕಾರ್ಯಗಾರದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ.ಆರ್.ಸಿದ್ದಪ್ಪ, ಡಾ.ಜಿ.ಮಂಜುನಾಥ್, ಡಾ.ಜಿ.ಪಿ.ಮುತ್ತುರಾಜು ತೆಂಗಿನ ಬೆಳೆಯ ಸಮಗ್ರ ಅಭಿವೃದ್ದಿಯ ಬಗ್ಗೆ ಮಾಹಿತಿ ನೀಡಿದರು.
ರೈತರಿಗೆ ಉಪಯುಕ್ತವಾಗಲಿ ಎಂಬ ಕಾರಣದಿಂದ ತೆಂಗಿನ ಉತ್ಪನ್ನಗಳ ಪ್ರದರ್ಶವನ್ನು ಏರ್ಪಡಿಸಲಾಗಿತ್ತು. ನಂತರ ರೈತರಿಗೆ ತೆಂಗಿನ ಸಸಿಯನ್ನು ಶಾಸಕ ಮಧುಜಿಮಾದೇಗೌಡ ವಿತರಣೆ ಮಾಡಿದರು. ಕಾರ್ಯಗಾರದಲ್ಲಿ ನೂರಾರು ತೆಂಗುಬೆಳೆ ರೈತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ತೆಂಗು ಅಭಿವೃದ್ದಿ ಮಂಡಳಿ ಉಪನಿರ್ದೇಶಕ ಆರ್.ಜಯಂತ್, ಮಹದೇಶ್ವರ ತೆಂಗುಬೆಳೆಗಾರರ ಒಕ್ಕೂಟದ ಅಧ್ಯಕ್ಷ ಚಂದೂಪುರ ಪಾಪಣ್ಣ, ತೋಟಗಾರಿಕೆ ಉಪನಿರ್ದೇಶಕರಾದ ಕೆ.ಎನ್.ರೂಪಶ್ರೀ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಕೆ.ಎಂ.ರೇಖಾ, ಸಹಾಯಕ ತೋಟಗಾರಿಕೆ ಅಧಿಕಾರಿ ಡಾ.ಶಿವಪ್ರಸಾದ್ ಸೇರಿದಂತೆ ಹಲವರಿದ್ದರು.