ನಮ್ಮ ದೇಶದ ಭವಿಷ್ಯ ಯುವಕರ ಕೈಯಲ್ಲಿದೆ ಅಂತಹ ಯುವ ಶಕ್ತಿ ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯಕರ ಹವ್ಯಾಸಗಳನ್ನು ಪ್ರಾರಂಭದಲ್ಲಿ ಬೆಳೆಸಿಕೊಂಡು ಸತ್ಪ್ರಜೆಗಳಾಗಬೇಕೆಂದು ಪ್ರಧಾನ ಸಿವಿಲ್ ನ್ಯಾಯಾಧೀಶ ದೇವರಾಜ್ ವೈ. ಹೆಚ್. ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ತಾಲ್ಲೂಕು ಕಾನೂನು ಸೇವಾ ಸಮಿತಿ ಶ್ರೀರಂಗಪಟ್ಟಣ, ವಕೀಲರ ಸಂಘ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಮಂಡ್ಯ ಹಾಗೂ ಆರಾಧನಾ ಪದವಿ ಪೂರ್ವ ಕಾಲೇಜು, ಪಿ.ಹೊಸಹಳ್ಳಿ ಇವರುಗಳ ಸಹಭಾಗಿತ್ವದಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನ ಪಿ ಹೊಸಹಳ್ಳಿ ಗ್ರಾಮದ ಆರಾಧನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ “ಮಾದಕ ವ್ಯಸನಗಳ ಕುರಿತು ಕಾನೂನು ಅರಿವು ಕಾರ್ಯಕ್ರಮ”ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಬಳಕೆಯಿಂದ ದೂರವಿರಲು ತಿಳಿಸಿ ಉಲ್ಲಂಘನೆಗೆ ಕಾನೂನಿನ ಅಡಿಯಲ್ಲಿ ವಿಧಿಸಲಾಗುವ ಶಿಕ್ಷೆ ಬಗೆಗೆ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ತಿಮ್ಮರಾಜು.ಎಸ್.ಎನ್ ವಿದ್ಯಾರ್ಥಿಗಳಿಗೆ ತಂಬಾಕು, ಮದ್ಯಪಾನ ಹಾಗೂ ಮಾದಕ ಉತ್ಪನ್ನಗಳ ಬಳಕೆಯಿಂದ ಉಂಟಾಗುವ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳ ಬಗ್ಗೆ, ನಿಯಮಬಾಹಿರ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಬಳಕೆಗೆ ಕೋಟ್ಪಾ ಕಾಯಿದೆ ಅಡಿಯಲ್ಲಿ ವಿಧಿಸಲಾಗುವ ದಂಡ ಹಾಗೂ ಶಿಕ್ಷೆಗಳ ಬಗೆಗೆ ಅರಿವು ಮೂಡಿಸಿ ವಿದ್ಯಾರ್ಥಿಗಳ ಹಾಗೂ ದೇಶದ ಆರೋಗ್ಯಯುತ ಭವಿಷ್ಯಕ್ಕಾಗಿ ವ್ಯಸನಮುಕ್ತ ಜೀವನ ನಡೆಸಲು ಆ ಮೂಲಕ ತಂಬಾಕು ಮುಕ್ತ, ಆರೋಗ್ಯದ ನಾಡನ್ನು ನಿರ್ಮಿಸಲು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಅನಂತರಾಜು ಕಾರ್ಯಕ್ರಮದ ಉದ್ದೇಶ ಈಡೇರಿಕೆಗಾಗಿ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ವ್ಯಾಸಂಗದ ಕಡೆಗೆ ಗಮನ ಹರಿಸಿ ಪ್ರಪಂಚದ ಅತ್ಯುತ್ತಮ ಸಾಧಕರಾಗಲು ಸಂದೇಶ ನೀಡಿ ಕಾರ್ಯಕ್ರಮದ ಆಯೋಜನೆ ಮಾಡಿದ್ದ ತಾಲೂಕು ಕಾನೂನು ಸೇವಾ ಸಮಿತಿಗೆ, ಆರೋಗ್ಯ ಇಲಾಖೆ ಹಾಗೂ ಆರಾಧನಾ ಸಂಸ್ಥೆಗೆ ಧನ್ಯವಾದ ಹೇಳಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ವಿದ್ಯಾರ್ಥಿಗಳಿಗೆ ವ್ಯಸನ ಮುಕ್ತ ಜೀವನದ ಪ್ರತಿಜ್ಞಾ ವಿಧಿ ಭೋದಿಸಿದರು.
ಈ ಕಾರ್ಯಕ್ರಮದಲ್ಲಿ ಆಪರ ಸಿವಿಲ್ ನ್ಯಾಯಾಧೀಶ ಹನುಮಂತರಾಯಪ್ಪ. ಬಿ.ಆರ್, ತಾಲೂಕು ಆರೋಗ್ಯಾಧಿಕಾರಿ ಡಾ.ಎನ್ ಕೆ ವೆಂಕಟೇಶ್, ವಕೀಲರ ಸಂಘದ ಅಧ್ಯಕ್ಷ ಸತ್ಯ ನಾರಾಯಣ, ಕಾರ್ಯದರ್ಶಿ ಡಿ. ಚಂದ್ರೇಗೌಡ, ಪ್ರಾಂಶುಪಾಲ ಯೋಗಣ್ಣ ಜೆ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ, ಉಪನ್ಯಾಸಕ ಕೇಶವ, ತಾಲ್ಲೂಕು ಶಿಕ್ಷಣ ಸಂಯೋಜಕ ರಾಮಚಂದ್ರ,ಹೇಮಣ್ಣ ಹಾಗೂ ಕಾಲೇಜಿನ ಉಪನ್ಯಾಸಕರು ಹಾಜರಿದ್ದರು.