ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕಾವೇರಿ ಅನ್ಯಾಯ ಖಂಡಿಸಿ ಮದ್ದೂರು ತಾಲ್ಲೂಕಿನ ಗೆಜ್ಜಲರೆಗೆ ಬಳಿ ರೈಲು ತಡೆ ನಡೆಸಲು ಮುಂದಾದ ರೈತಸಂಘ ಕಾರ್ಯಕರ್ತರನ್ನು ಶುಕ್ರವಾರ ಪೊಲೀಸರು ಬಂಧಿಸಿದರು.
ಈ ಸಂದರ್ಭದಲ್ಲಿ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು, ಪ್ರತಿಭಟನಾನಿರತ ರೈತರನ್ನು ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಪಟ್ಟರು. ಕೆಲವು ರೈತರು ಒಳನುಗ್ಗಿ ಹಳಿಗಳ ಮೇಲೆ ಓಡಿದರು, ಅವರನ್ನು ಪೊಲೀಸರು ಹಿಡಿದು ಬಂಧಿಸಿದರು. ರೈಲು ಹಳಿಗಳ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿತ್ತು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ‘ವಂದೇ ಭಾರತ್’ ರೈಲು ತಡೆಗೆ ಸಿದ್ಧತೆ ನಡೆಸಿ ಹಳಿ ಮೇಲೆ ಓಡಿದ ರೈತರನ್ನು ಪೊಲೀಸರು ತಡೆದು ವಶಕ್ಕೆ ತೆಗೆದುಕೊಂಡು, ಬಸ್ ಗಳಲ್ಲಿ ತುಂಬಿಕೊಂಡು ಕರೆದೊಯ್ದರು.
ರೈತಸಂಘವು ರೈಲುತಡೆ ನಡೆಸುವುದಾಗಿ ಮೊದಲೇ ಪ್ರಕಟಿಸಿದ್ದರಿಂದ ರೈತರನ್ನ ತಡೆಯಲು ನೂರು ಮೀಟರ್ ದೂರದಲ್ಲೆ ಪೊಲೀಸರು ಬ್ಯಾರಿಕೇಡ್ ಹಾಕಿ, ತಡೆ ಹಾಕಲು ಪೊಲೀಸರು ಸಿದ್ದತೆ ಮಾಡಿಕೊಂಡಿದ್ದರು. ಇದರಿಂದ ಕುಪಿತಗೊಂಡ ರೈತರು, ಪೊಲೀಸರು ಹಾಗೂ ಸರ್ಕಾರದ ವಿರುದ್ಧವು ಧಿಕ್ಕಾರ ಕೂಗಿದರು.
ರೈಲ್ವೆ ಹಳಿ ಬಳಿ ಪ್ರತಿಭಟನೆಗೆ ಅವಕಾಶ ಕಲ್ಪಿಸುವಂತೆ ರೈತರು ಕೋರಿದರು. ಆಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅವರು ಏಳು ರೈತರಿಗೆ ಅವಕಾಶ ಕಲ್ಪಿಸಿದರು.