ಕಾವೇರಿ ಅನ್ಯಾಯ ಖಂಡಿಸಿ ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಕಳೆದ ಹಲವಾರು ದಿನಗಳಿಂದ ನಡೆಸುತ್ತಿರುವ ಕಾವೇರಿ ಹೋರಾಟಕ್ಕೆಇಂ ದು ಅಖಂಡ ಕರ್ನಾಟಕ ರಕ್ಷಣಾ ಸೇವಾ ದಳದ ರಾಜ್ಯಾಧ್ಯಕ್ಷ ಸಿಂಹ ಶಿವು ಗೌಡ, ರಾಜ್ಯ ಕಾನೂನು ಘಟಕದ ಅಧ್ಯಕ್ಷ ವಕೀಲ ಎಂ.ಗುರುಪ್ರಸಾದ್, ಜಿಲ್ಲಾಧ್ಯಕ್ಷ ಕೆ.ಟಿ .ಅನಿಲ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಲಿಖಿತವಾಗಿ ಬೆಂಬಲ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಸಿಂಹ ಶಿವು ಗೌಡ ಮಾತನಾಡಿ, ನಾವು ಹಲವಾರು ವರ್ಷಗಳಿಂದ ಕಾವೇರಿ ಸಮಸ್ಯೆ ಪರವಾಗಿ ಅನೇಕ ಜಿಲ್ಲೆಗಳಲ್ಲಿ ಹೋರಾಟ ಮಾಡುತ್ತಿದ್ದು ಇಂದು ನಿರಂತರವಾಗಿ ಧರಣಿ ಮಾಡುತ್ತಿರುವ ರೈತ ಹಿತರಕ್ಷಣ ಸಮಿತಿಯ ಪದಾಧಿಕಾರಿಗಳಿಗೆ ಲಿಖಿತವಾಗಿ ನಾವು ನಿಮ್ಮ ಜೊತೆ ಇದ್ದೇವೆ, ನಿಮ್ಮ ಎಲ್ಲಾ ಹೋರಾಟಕ್ಕೆ ನಮ್ಮ ಸಂಘಟನೆ ಬೆಂಬಲವಿದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಈ ಸಮಸ್ಯೆಗೆ ಒಂದು ಶಾಶ್ವತ ಪರಿಹಾರವನ್ನು ಕಂಡುಹಿಡಿಯಬೇಕು ನಮ್ಮ ನಾಡಿನ ಕನ್ನಡ ಜನತೆಗೆ ನೀರಿನ ಅಹಂಕಾರ ಉಂಟಾಗಿದೆ ಎಂದರು.
ಹಿರಿಯ ವಕೀಲ ಎಂ. ಗುರುಪ್ರಸಾದ್ ಮಾತನಾಡಿ, ನಿರಂತರ ಕಾವೇರಿ ಅನ್ಯಾಯ ಖಂಡಿಸಿ, ನಮ್ಮ ಸಂಘಟನೆ ಹೋರಾಟ ಮಾಡುತ್ತಿದ್ದು ಈ ಸಮಸ್ಯೆಗೆ ಪ್ರಧಾನಮಂತ್ರಿ ತಕ್ಷಣ ಮಧ್ಯ ಪ್ರವೇಶಿಸಿ ನೀರಿನ ಪ್ರಮಾಣ, ಬೇಸಾಯದ ಭೂಮಿ, ಜನಸಂಖ್ಯೆ, ಮಳೆಯ ಆಧಾರದ ಮೇಲೆ ಚಿಂತಿಸಿ, ರಾಜ್ಯದ ರೈತರು ಹಾಗೂ ಜನಸಾಮಾನ್ಯರ ಕುಡಿಯುವ ನೀರಿಗೆ ಒಂದು ಸೂಕ್ತ ಪರಿಹಾರ ಕಂಡು ಹಿಡಿಯಬೇಕಾಗಿದೆ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸೇನೆಯ ಅಧ್ಯಕ್ಷ ಮಂಜುನಾಥ್, ಅಖಂಡ ಕರ್ನಾಟಕ ರಕ್ಷಣಾ ಸೇವಾದಳದ ಮುಖಂಡರಾದ ರಾಜ್ಯ ಉಸ್ತುವಾರಿ ಸಯ್ಯದ್ ಎಜಿಯಾಜ್, ಬೇಬಿ ಸಂಪತ್, ಯಶವಂತ್, ಎಂ.ಆರ್. ಮಂಜುನಾಥ್ ಸ್ವಾಮಿ ಗೌಡ, ಮಳವಳ್ಳಿ ತಾಲೂಕು ಅಧ್ಯಕ್ಷ ದಡದಪುರ ಶಿವಣ್ಣ, ಪ್ರವೀಣ್. ಎಚ್. ಪಿ., ಗುತ್ತಲು ನವೀನ್ ಸೇರಿದಂತೆ ಅನೇಕ ಗಣ್ಯರು ಹೋರಾಟಗಾರರು ಹಾಜರಿದ್ದರು.