ಮಂಡ್ಯದ ಶ್ರೀಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿನಿಯರು ಬೆಂಗಳೂರಿನ ವಿದ್ಯಾ ಸಂಸ್ಕಾರ್ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ನಡೆದ ರಾಜ್ಯ ಮಟ್ಟದ ಸಿಬಿಎಸ್ಸಿ ಶಾಲೆಗಳ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಶ್ರೀಚೈತನ್ಯ ಟೆಕ್ನೋ ಶಾಲೆಯ ವೈಷ್ಣವಿ ನಾಯಕತ್ವದಲ್ಲಿ ಕೃಷ್ಣವೇಣಿ, ಮೌಲ್ಯ, ಶಮಿತಾ ಎಸ್. ಕುಮಾರ್, ನೇಹ, ಇಶಾ, ಹರ್ಷಿತ,ತೇಜಸ್ವಿನಿ, ಯಶಸ್ವಿನಿ ಹಾಗೂ ನಿಧಿ ಆಟಗಾರ್ತಿಯರಿದ್ದ ತಂಡ ಫೈನಲ್ ಪಂದ್ಯದಲ್ಲಿ ಬನ್ನೇರುಘಟ್ಟದ ಬಿಜಿಎಸ್ ಶಾಲಾ ತಂಡವನ್ನು ಮಣಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಈ ಮೂಲಕ ನವೆಂಬರ್ ತಿಂಗಳಲ್ಲಿ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆಯುವ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಅರ್ಹತೆ ಪಡೆದಿದ್ದಾರೆ. ಪಂದ್ಯಾವಳಿಯಲ್ಲಿ ಉತ್ತಮ ಆಟ ಪ್ರದರ್ಶಿಸಿದ ಕೃಷ್ಣವೇಣಿ ಉತ್ತಮ ದಾಳಿಗಾರ್ತಿ ಹಾಗೂ ಮೌಲ್ಯ ಉತ್ತಮ ಆಟಗಾರ್ತಿ ಪ್ರಶಸ್ತಿ ಪಡೆದರು.
ವಾಲಿಬಾಲ್ ಪಂದ್ಯಾವಳಿಯಲ್ಲಿ ಐದು ಶಾಲೆಗಳನ್ನು ಮಣಿಸಿ ಫೈನಲ್ ನಲ್ಲಿ ಬನ್ನೇರುಘಟ್ಟದ ಬಿಜಿಎಸ್ ಶಾಲಾ ತಂಡವನ್ನು ಮಣಿಸುವ ಮೂಲಕ ಪ್ರಥಮ ಸ್ಥಾನ ಗಳಿಸಿರುವ ಶ್ರೀ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿನಿಯರನ್ನು ವಾಲಿಬಾಲ್ ಕೋಚ್ ಚರಣ್ ಎಚ್.ಎಂ ಹಾಗೂ ಶಾಲಾ ಆಡಳಿತ ಮಂಡಳಿ ಅಭಿನಂದಿಸಿದೆ.
ವಾಲಿಬಾಲ್ ಕೋಚ್ ಎಚ್. ಎಂ. ಚರಣ್ ಅವರ ಮಾರ್ಗದರ್ಶನದಲ್ಲಿ ನಮ್ಮ ಮಕ್ಕಳು ಉತ್ತಮ ಆಟವಾಡಿ, ಚಿನ್ನದ ಪದಕ ಪಡೆಯುವ ಮೂಲಕ ನಮಗೆ ಹಾಗೂ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಪೋಷಕರು ಹರ್ಷ ವ್ಯಕ್ತಪಡಿಸಿದರು.
ಪಂದ್ಯಾವಳಿಯಲ್ಲಿ ಉತ್ತಮ ಆಟವಾಡಿದ ನಮ್ಮ ಮಕ್ಕಳ ಸಾಧನೆಯಿಂದ ಸಂತಸವಾಗಿದ್ದು, ವಾಲಿಬಾಲ್ ಕ್ರೀಡೆಯಲ್ಲಿ ನಮ್ಮ ಮಕ್ಕಳು ಮತ್ತಷ್ಟು ಸಾಧನೆ ಮಾಡಲು ಶಾಲಾ ಆಡಳಿತ ಮಂಡಳಿ ಪ್ರೋತ್ಸಾಹ ನೀಡಬೇಕೆಂದು ಪೋಷಕರು ಮನವಿ ಮಾಡಿದ್ದಾರೆ.