ರಾಜ್ಯದ ರೈತರ ಹಿತ ಕಡೆಗಣಿಸಿ ತಮಿಳುನಾಡಿಗೆ ನೀರು ಹರಿಸುತ್ತಿರುವ ಕೇಂದ್ರ ಹಾಗೂ ಸರ್ಕಾರಗಳ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ನಿರಂತರ ಧರಣಿ ಇಂದಿನ ವಿಜಯ ದಶಮಿಯಂದು 50 ನೇ ದಿನಕ್ಕೆ ಕಾಲಿಟ್ಟಿದೆ, ಒಂದೆಡೆ ಮೈಸೂರಿನಲ್ಲಿ ಸಂಭ್ರಮದ ದಸರಾ ನಡೆಸುತ್ತಿದ್ದರೆ, ಮಂಡ್ಯದಲ್ಲಿ ರೈತರು ಕಪ್ಪು ಬಾವುಟ ಪ್ರದರ್ಶನ ಮಾಡಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ರೈತ, ದಲಿತ, ಪ್ರಗತಿಪರ ಹಾಗೂ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಕೇಂದ್ರ – ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು.
ಕಾವೇರಿ ನೀರಿಗಾಗಿ ಮಂಡ್ಯ ಜಿಲ್ಲೆ ಸೇರಿದಂತೆ ನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಹೋರಾಟ ನಡೆಯುತ್ತಿದ್ದರೂ ಸರ್ಕಾರ ನೀರು ನಿಲ್ಲಿಸದೇ ನಿರ್ಲಕ್ಷ್ಯತೆ ತೋರಿದ್ದು, ಸರ್ಕಾರದ ಮೌನ ನಡೆ ಹೋರಾಟಗಾರರ ಪಾಲಿಗೆ ವಿಜಯದಶಮಿ ಕರಾಳವಾಗಿ ಪರಿಣಮಿಸಿದೆ, ಹಾಗಾಗಿ ಕಪ್ಪು ಬಾವುಟ ಪ್ರದರ್ಶಿಸಿ ಆಳುವ ಸರ್ಕಾರದ ನಡೆಯನ್ನು ಖಂಡಿಸಿದ್ದೇವೆ ಎಂದರು.
ಕೃಷ್ಣರಾಜಸಾಗರ ಸೇರಿದಂತೆ ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳ ನಿರ್ವಹಣೆ ಹೊಣೆ ಹೊತ್ತ ರಾಜ್ಯ ಸರ್ಕಾರ ನೆರೆ ರಾಜ್ಯಕ್ಕೆ ನಿರಂತರವಾಗಿ ನೀರು ಹರಿಸುತ್ತಿರುವ ಪರಿಣಾಮ ಜಲಾಶಯಗಳು ಬರಿದಾಗುತ್ತಿವೆ, ಎರಡು ರಾಜ್ಯಗಳ ನಡುವೆ ಮಾತುಕತೆಗೆ ಮುಂದಾಗದ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ, ರೈತರ ಪಾಲಿಗೆ ಆಳುವ ಸರ್ಕಾರಗಳು ಕಂಟಕ ಪ್ರಾಯವಾಗಿದೆ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸುನಂದ ಜಯರಾಂ,ಕೆ. ಬೋರಯ್ಯ, ಮಾಜಿ ಶಾಸಕ ಕೆ ಟಿ ಶ್ರೀಕಂಠೇಗೌಡ, ಸಿದ್ದರಾಮೇಗೌಡ, ಬೋರೇಗೌಡ, ಅಶೋಕ್, ರೈತಸಂಘದ ಇಂಡುವಾಳು ಚಂದ್ರಶೇಖರ್, ಕೃಷ್ಣಪ್ರಕಾಶ್, ಕನ್ನಡ ಸೇನೆ ಮಂಜುನಾಥ್, ಕಬ್ಬು ಬೆಳೆಗಾರರ ಸಂಘದ ವೇಣು, ಕನ್ನಡಪರ ಸಂಘಟನೆಯ ನಾರಾಯಣ್,ನೇಗಿಲ ಯೋಗಿ ಸಂಘಟನೆಯ ಜಯಶೀಲ ಮತ್ತಿತರರು ಭಾಗವಹಿಸಿದ್ದರು.