ಕರ್ನಾಟಕ-ತಮಿಳುನಾಡು ರಾಜ್ಯಗಳ ನಡುವೆ ಉಂಟಾಗಿರುವ ಕಾವೇರಿ ಸಮಸ್ಯೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಸಮರ್ಪಕವಾದ ದಾಖಲೆಗಳನ್ನು ಸುಪ್ರೀಂಕೋರ್ಟ್ ಸಲ್ಲಿಸುವ ಮೂಲಕ ಕಾನೂನು ಹೋರಾಟ ನಡೆಸಬೇಕೆಂದು ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ಜಪ್ರುಲ್ಲಾಖಾನ್ ಅಭಿಪ್ರಾಯಪಟ್ಟರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ನಿರಂತರ ಧರಣಿಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, ಕಾವೇರಿ ಸಮಸ್ಯೆ ಅತ್ಯಂತ ಹಳೆಯ ಸಮಸ್ಯೆ, ಎಲ್ಲಾ ರಾಜಕೀಯ ಪಕ್ಷಗಳ ಸರ್ಕಾರಗಳು ಆಳಿದ ನಂತರವೂ ಈ ಸಮಸ್ಯೆ ಜೀವಂತವಾಗಿದೆ. ಕಾವೇರಿ ಅಂತಿಮ ತೀರ್ಪು ನೀಡಿದ ನಂತರ ರಾಜ್ಯದಲ್ಲಿ ಕೃಷಿ ಜಮೀನಿನ ವಿಸ್ತೀರ್ಣ, ಜನಸಂಖ್ಯೆ ಹೆಚ್ಚಾಗಿದೆ, ಅಲ್ಲದೇ ಬೆಂಗಳೂರಿನ ಜನಸಂಖ್ಯೆಯೂ ಗಣನೀಯ ಮಟ್ಟದಲ್ಲಿ ಹೆಚ್ಚಾಗಿದೆ, ಈ ಎಲ್ಲ ಅಂಶಗಳ ದಾಖಲೆಗಳನ್ನು ಸುಪ್ರೀಂ ಕೋರ್ಟ್ ಗೆ ಹಾಜರು ಪಡಿಸಿ, ತಜ್ಞ ವಕೀಲರ ಮೂಲಕ ರಾಜ್ಯ ಸರ್ಕಾರ ನ್ಯಾಯಾಲಯದಲ್ಲಿ ವಾದ ಮಾಡಬೇಂದು ಆಗ್ರಹಿಸಿದರು.
ರೈತರಿಗೂ ಮುಸ್ಲಿಂ ಬಾಂಧವರಿಗೂ ವ್ಯವಹಾರಿಕ ಸಂಬಂಧ ಇದೆ, ಅನ್ನದಾತರ ಸಂಕಷ್ಟಕ್ಕೆ ಸಿಲುಕಿದರೆ ಮುಸ್ಲಿಂ ಜನತೆಗೂ ಕಷ್ಟವಾಗಲಿದೆ, ಆ ನಿಟ್ಟಿನಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸಮುದಾಯದ ಎಲ್ಲರೂ ಒಗ್ಗೂಡಿ ವಿರೋಧಿಸೋಣ, ಕಾವೇರಿ ಹೋರಾಟದಲ್ಲಿ ಜಿಲ್ಲೆಯ ಎಲ್ಲ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ಮುಸಲ್ಮಾನರು, ಮಹಿಳಾ ಸಂಘಟನೆಗಳ ಬೆಂಬಲ
ಕಾವೇರಿ ಹೋರಾಟಕ್ಕೆ ಬುಧವಾರ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದರು. ಧರಣಿಯಲ್ಲಿ ಜಾತ್ಯತೀತ ಜನತಾದಳ ಪಕ್ಷದ ಅಲ್ಪಸಂಖ್ಯಾತ ಮುಖಂಡರು, ಮಸೀದಿಗಳ ಮುಖ್ಯಸ್ಥರು, ಸ್ತ್ರೀ ಶಕ್ತಿ ಮಹಿಳೆಯರು, ಮಹಿಳಾ ಸಂಘಟನೆಗಳ ಕಾರ್ಯಕರ್ತೆಯರು ಭಾಗವಹಿಸಿದ್ದರು. ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು,
ನಗರಸಭೆ ಜಾ ದಳ ಸದಸ್ಯರಾದ ನಾಗೇಶ್, ಮೀನಾಕ್ಷಿ ಪುಟ್ಟಸ್ವಾಮಿ, ಮಾಜಿ ಸದಸ್ಯ ಮುಜಾಯಿದ್,ಮಹಮ್ಮದ್, ಅಫ್ಜಲ್, ಫೈರೋಜ್,ಮುಜಾಸಿರ್ ಇತರರಿದ್ದರು.
ಜ್ಯೋತಿ ಸಂಜೀವಿನಿ, ಸ್ಪಂದನ, ಅಖಂಡ ಕರ್ನಾಟಕ ಒಕ್ಕಲಿಗರ ಸಂಘದ ಮಹಿಳಾ ಘಟಕ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಕಾವೇರಿ ಹೋರಾಟ ಬೆಂಬಲಿಸಿದರು.
ಸುಜಾತ ಸಿದ್ದಯ್ಯ, ಅನುಪಮ, ಸೌಭಾಗ್ಯ, ಶಿವರತ್ನಮ್ಮ, ವೀಣಾ, ತಾಯಮ್ಮ, ಸುಶೀಲಮ್ಮ ನೇತೃತ್ವ ವಹಿಸಿದ್ದರು.
ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಸುನಂದ ಜಯರಾಂ, ಕೆ ಬೋರಯ್ಯ, ರೈತಸಂಘದ ಇಂಡುವಾಳು ಚಂದ್ರಶೇಖರ್, ಕನ್ನಡ ಸೇನೆ ಮಂಜುನಾಥ್, ಸುಜಾತಕೃಷ್ಣ ಮತ್ತಿತರರು ಭಾಗವಹಿಸಿದ್ದರು.