ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ಮಾಡಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರ ಹಾಗೂ ಕರ್ನಾಟಕದ ಹಿತ ಕಾಯಲು ವಿಫಲವಾಗಿರುವ ಕೇಂದ್ರ – ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ನಡೆಸುತ್ತಿರುವ ನಿರಂತರ ಧರಣಿ 63ನೇ ದಿನಕ್ಕೆ ಕಾಲಿಟ್ಟದ್ದು, ಸೋಮವಾರ ವಿವಿಧ ಸಂಘಟನೆಗಳು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದವು.
ನಾಗಮಂಗಲ ತಾಲೂಕು ರೈತಸಂಘ, ಕರ್ನಾಟಕ ಕಾವಲು ಪಡೆ, ನಿವೃತ್ತ ಎಂಜಿನಿಯರ್ ಸಂಘ ಹಾಗೂ ದೊಡ್ಡರಸಿನಕೆರೆ, ಚಿಕ್ಕರಸಿನಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮದ ಮುಖಂಡರು ಭಾಗಿಯಾಗಿ ಕಾವೇರಿ ಹೋರಾಟ ಬೆಂಬಲಿಸಿದರು.
ಈ ಸಂದರ್ಭದಲ್ಲಿ ಕೃಷ್ಣರಾಜಸಾಗರದ ನಿವೃತ್ತ ಇಂಜಿನಿಯರ್ ಕೆ.ಜಿ ವಿಜಯ್ ಕುಮಾರ್ ಮಾತನಾಡಿ, ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ನಿರಂತರ ಅನ್ಯಾಯ ಖಂಡಿಸಿದರು.ಕಾರ್ಯಪಾಲಕ ಅಭಿಯಂತರ ಎಂ. ಪುಟ್ಟರಾಜು, ಇಂಜಿನಿಯರ್ ಸಂಘದ ದೇವರಾಜು ಇತರರಿದ್ದರು. ಕರ್ನಾಟಕ ಕಾವಲು ಪಡೆ ಕಾರ್ಯಕರ್ತರು ಕಾವೇರಿ ಹೋರಾಟ ಬೆಂಬಲಿಸಿದರು.
ನಾಗಮಂಗಲ ತಾಲ್ಲೂಕು ರೈತಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನ್ಯಾಯ ದೊರಕಿಸಿಕೊಡಲು ಆಳುವ ಸರ್ಕಾರಗಳು ವಿಫಲವಾಗಿವೆ, ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇರುವಾಗ ನೆರೆರಾಜ್ಯಕ್ಕೆ ವಾಸ್ತವ ಪರಿಸ್ಥಿತಿ ಅವಲೋಕಿಸದೆ ನೀರು ಹರಿಸಲು ಆದೇಶ ಮಾಡಿರುವುದು ಅವೈಜ್ಞಾನಿಕ ಎಂದು ಹೇಳಿದರು.
ಪ್ರಗತಿಪರ ಮುಖಂಡ ಶಿವಲಿಂಗಯ್ಯ ಮಾತನಾಡಿ, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ನಿರಂತರ ಅನ್ಯಾಯ ಆಗುತ್ತಿದೆ, ಅನ್ಯಾಯದ ವಿರುದ್ಧ ಸಂಘಟನೆಗಳ ಜೊತೆಗೂಡಿ ಜನತೆ ಹೋರಾಟ ಮಾಡುತ್ತಿದ್ದರೆ ನ್ಯಾಯ ದೊರಕಿಸಿ ಕೊಡಬೇಕಾದ ಸರ್ಕಾರ ಕಾವೇರಿ ಚಳವಳಿ ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಕಾವೇರಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದೆಂದು ಹೇಳಿದರು.
ಧರಣಿಯಲ್ಲಿ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಸುನಂದ ಜಯರಾಂ. ರೈತ ಸಂಘದ ಇಂಡುವಾಳು ಚಂದ್ರಶೇಖರ್,ಮುದ್ದೇಗೌಡ, ಕೃಷ್ಣಪ್ರಕಾಶ್, ಕನ್ನಡ ಸೇನೆ ಮಂಜುನಾಥ್, ನಾರಾಯಣ್ ನೇತೃತ್ವ ವಹಿಸಿದ್ದರು.
ರೈತ ಸಂಘದ ಬೋರೇಗೌಡ, ಲೋಕೇಶ್, ರಾಜಣ್ಣ, ಹೇಮಂತ್ ಕುಮಾರ್,ಮಂಜು, ಹರೀಶ್, ಕಿರಣ್, ಕರ್ನಾಟಕ ಕಾವಲು ಪಡೆಯ ರಾಜ್ಯಾಧ್ಯಕ್ಷ ಮೋಹನ್ ಕುಮಾರ್ ಗೌಡ, ರವಿ ಗೌಡ, ಭೂಮಿ ನಾಗರಾಜ್,ಮಹದೇವ್, ರವೀಂದ್ರ,ಉಮೇಶ್, ಈಶ್ವರ್ ಇತರರಿದ್ದರು.