ಮಂಡ್ಯ ತಾಲ್ಲೂಕಿನ ನಲ್ಲಹಳ್ಳಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹೊಡಾಘಟ್ಟ ಇವರ ಸಹಯೋಗದಲ್ಲಿ ತಾಲ್ಲೂಕು ಮಟ್ಟದ ಇ–ಸ್ವತ್ತು ಆಂದೋಲನಕ್ಕೆ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಗಣಿಗ ರವಿಕುಮಾರ್ ಅವರು ನೀಡಿದರು.
ನಂತರ ಮಾತನಾಡಿದ ಅವರು, ವೃದ್ದಾಪ್ಯ ವೇತನ, ಅಂಗವಿಕಲ ವೇತನ ಹಾಗೂ ವಿಧವಾ ವೇತನಗಳ ಉಚಿತ ನೋಂದಣಿ ಕಾರ್ಯಕ್ರಮ, ನಿಂತು ಹೋಗಿರುವ ಪಿಂಚಣಿಗಳ ಮರು ಚಾಲನೆ ನೀಡುವುದು, ಗೃಹಲಕ್ಷ್ಮೀ ಯೋಜನೆಯ ತಲುಪದ ಫಲಾನುಭವಿಗಳ ಪರಿಶೀಲನೆ ನಡೆಸಲಾಗುವುದು ಸೇರಿದಂತೆ ರೈತರ ಯೋಜನೆಗಳು ಅವರಿಗೆ ತಲುಪುವಂತೆ ಮಾಡಲು ಈ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು.
ಮಂಡ್ಯ ತಾಲ್ಲೂಕಿನಾದ್ಯಂತ ಕೆಲವು ರೈತರಿಗೆ ಯೋಜನೆಗಳು ತಲುಪುತ್ತಿಲ್ಲ ಎಂಬ ಆರೋಪವಿದ್ದು, ಅದನ್ನು ಸರಿಪಡಿಸಲಾಗುವುದು, ತಾಲ್ಲೂಕು ಆಡಳಿತವನ್ನೇ ಜನರ ಬಳಿಗೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಮುಖ್ಯಮಂತ್ರಿ ಅವರ ಆಡಳಿತದಲ್ಲಿ ಎಲ್ಲವೂ ಸರಿಯಿರುತ್ತದೆ. ಈ ಹಿಂದೆ ಇದ್ದ ಆಡಳಿತದ ಬಗ್ಗೆ ಗೊತ್ತಿಲ್ಲ, ಇನ್ನುಮುಂದೆ ನಮ್ಮ ಅಧಿಕಾರಿಗಳು ಜನರ ಕೆಲಸ ಮಾಡಿಕೊಡುತ್ತಾರೆ ಎಂದು ಭರವಸೆ ನೀಡಿದರು. ಇ–ಸ್ವತ್ತು ಹಾಗೂ ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಶಿವಕುಮಾರ ಬಿರಾದರ್, ತಾ.ಪಂ.ಇಒ ಎಂ.ಎಸ್.ವೀಣಾ, ತೋಟಗಾರಿಕೆ ಇಲಾಖೆ ಅಧಿಕಾರಿ ಶಶಿಕಲಾ, ಸಿಡಿಪಿಒ ಅಂಬಿಕಾ, ಬಿಇಒ ಸೌಭಾಗ್ಯ, ಆಯುಷ್ ಇಲಾಖೆಯ ಡಾ.ಅಂಬಿಕಾ, ಡಾ.ಪ್ರಸನ್ನ, ಡಾ.ಸೌಮ್ಯ, ಗ್ರಾ.ಪಂ.ಅಧ್ಯಕ್ಷ ಬಿ.ಎಸ್.ಮಹೇಶ್, ಉಪಾಧ್ಯಕ್ಷೆ ಮಂಜುಳಾ, ಪಿಡಿಒಗಳಾದ ಕೋಮಲ, ಮಲ್ಲೇಶ್ ಭಾಗವಹಿಸಿದ್ದರು.