ತಮಿಳುನಾಡಿಗೆ ನೀರು ಹರಿಸಲು ಆದೇಶಿಸಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ಕರ್ನಾಟಕದ ಹಿತ ಕಾಪಾಡದ ಕೇಂದ್ರ – ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯು ಮಂಡ್ಯದಲ್ಲಿ ನಡೆಸುತ್ತಿರುವ ಸರದಿ ಉಪವಾಸ 7ನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರ ರೈತ ಮಹಿಳೆಯರು ಉಪವಾಸ ಸತ್ಯಾಗ್ರಹ ಕೈಗೊಂಡು ಹೋರಾಟ ಬೆಂಬಲಿಸಿದರು.
ಇಂದಿನ ಉಪವಾಸ ಸತ್ಯಾಗ್ರಹದಲ್ಲಿ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯ ರೈತ ಮಹಿಳೆಯರಾದ ದೊಡ್ಡೋಳಮ್ಮ, ಗೌರಮ್ಮ, ನಿಂಗಮ್ಮ, ಮಂಜುಳಾ, ಪ್ರಮೀಳಾ, ನಿಂಗಮ್ಮ ಹಾಗೂ ಶೃತಿ ಉಪವಾಸ ನಡೆಸಿದರು.
ರೈತ ಸಂಘದ ಮುಖಂಡ ಇಂಡುವಾಳು ಚಂದ್ರಶೇಖರ್ ಮಾತನಾಡಿ, ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲದ ಅಧಿವೇಶನದಲ್ಲಿ ಆರಂಭದ ದಿನಗಳಲ್ಲೆ ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸಮಗ್ರವಾಗಿ ಚರ್ಚಿಸಬೇಕು, ಪ್ರತಿಪಕ್ಷಗಳು ಈ ಬಗ್ಗೆ ಎಚ್ಚೆತ್ತು ಆಡಳಿತ ರೂಢ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ಹಾಕಿ, ರೈತರಿಗೆ ನ್ಯಾಯ ದೊರಕಿಸಿಕೊಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ಕೆರೆಗಳಲ್ಲಿ ಹೂಳು ತುಂಬಿಕೊಂಡಿವೆ ಇದರಿಂದ ಸಮರ್ಪಕವಾಗಿ ನೀರು ಸಂಗ್ರಹವಾಗುತ್ತಿಲ್ಲ, ಬಂದ ನೀರು ಬಂದ ಹಾಗೆ ಹೊರ ಹೋಗುತ್ತಿದೆ, ಸರ್ಕಾರ ಕೆರೆಗಳಿಗೆ ನೀರು ತುಂಬಿಸುತ್ತೇವೆ ಎನ್ನುತ್ತಿದೆ, ಆದರೆ ವಾಸ್ತವವಾಗಿ ಕೆರೆಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗದ ಮಟ್ಟಿಗೆ ಹೂಳು ನಿಂದ ತುಂಬಿಹೋಗಿವೆ, ಮೊದಲು ಕೆರೆಗಳಿಂದ ಹೂಳೆತ್ತುವ ಕೆಲಸ ಮಾಡಲಿ ಎಂದು ಆಗ್ರಹಿಸಿದರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಬೋರಯ್ಯ, ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ.ಮುದ್ದೇಗೌಡ, ಕನ್ನಡ ಸೇನೆ ಮಂಜುನಾಥ್, ಮೀರಾ ಶಿವಲಿಂಗಯ್ಯ,ದಸಂಸ ಎಂ.ವಿ ಕೃಷ್ಣ, ಜೈ ಕರ್ನಾಟಕ ಪರಿಷತ್ ನಾರಾಯಣ್, ಸುಶೀಲ ನೇತೃತ್ವ ವಹಿಸಿದ್ದರು.