ಯುವ ಮುಖಂಡ ಹಾಗೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಸಿ.ಎಂ. ದ್ಯಾವಪ್ಪ ಅವರಿಗೆ ಮಂಡ್ಯ ಲೋಕಸಭೆಯ ಕಾಂಗ್ರೆಸ್ ಟಿಕೆಟ್ ನೀಡುವ ಮೂಲಕ ಪಕ್ಷದ ವರಿಷ್ಠರು, ದೇಶಕ್ಕೆ ಮಾದರಿ ಸಂದೇಶ ನೀಡಬೇಕೆಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸಂತೆಕಸಲಗೆರೆ ಬಸವರಾಜು ಆಗ್ರಹಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ತಾಲೂಕಿನ ಚಿಕ್ಕಬಳ್ಳಿ ಗ್ರಾಮದ ಸಿ.ಎಂ. ದ್ಯಾವಪ್ಪರವರು ಕಳೆದ 30 ವರ್ಷಗಳಿಂದಲೂ ಸಾಮಾಜಿಕವಾಗಿ ಸರ್ವ ಸಮುದಾಯದ ಜನರ ದುಃಖ ದುಮ್ಮಾನಗಳಿಗೆ ಸ್ಪಂದಿಸುತ್ತಾ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸಾಮಾನ್ಯಕಾರ್ಯಕರ್ತರಾಗಿ, ರಾಹುಲ್ ಗಾಂಧಿಯವರೊಂದಿಗೆ ದೇಶದುದ್ದಕ್ಕೆ ಭಾರತ ಜೋಡೋ ಯಾತ್ರೆ ಹಾಗೂ ಭಾರತ ಜೋಡೋ ನ್ಯಾಯಯಾತ್ರೆಯಲ್ಲಿ ಸಂಚರಿಸುತ್ತಿರುವ ದ್ಯಾವಪ್ಪ ಅವರಿಕೆ ಲೋಕಸಭೆ ಟಿಕೆಟ್ ನೀಡಿ, ಯುವ ಮುಖಂಡರಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.
ಕ್ರಿಯಾಶೀಲ ವ್ಯಕ್ತಿಯಾದ ದ್ಯಾವಪ್ಪ, ವಿದ್ಯಾರ್ಥಿ ನಾಯಕರಾಗಿ, ಸಾಮಾಜಿಕ, ಶೈಕ್ಷಣಿಕವಾಗಿ ಜನಪರವಾಗಿ ನಿಂತು ಹೋರಾಟ ಮಾಡಿರುತ್ತಾರೆ. ಗ್ರಾಮೀಣ ಕೃಪಾಂಕಕ್ಕೆ ಒತ್ತಾಯಿಸಿ ಮಂಡ್ಯದಿಂದ ಬೆಂಗಳೂರಿನವರೆಗೂ ಪಾದಯಾತ್ರೆ ಮಾಡಿ, ಸರ್ಕಾರದ ಗಮನ ಸೆಳೆದಿರುತ್ತಾರೆ. ಇಂತಹ ನಾಯಕನಿಗೆ ಕಾಂಗ್ರೆಸ್ ವರಿಷ್ಠರು ಟಿಕೆಟ್ ನೀಡಬೇಕೆಂದು ಆಗ್ರಹಿಸಿದರು.
ಉಳ್ಳವರಿಗೆ ಟಿಕೆಟ್
ಟಿಕೆಟ್ ಗಳು ಉದ್ಯಮಿಗಳು, ಹಣವುಳ್ಳವರ ಪಾಲಾಗುತ್ತಿವೆ, ಸಾಮಾನ್ಯ ಹಾಗೂ ನಿಷ್ಟಾವಂತ ಕಾರ್ಯಕರ್ತ ಸಿ.ಎಂ.ದ್ಯಾವಪ್ಪ ಅವರಿಗೆ ಟಿಕೆಟ್ ನೀಡಿದರೆ, ಜಿಲ್ಲೆಗೆ ಒಳ್ಳೆಯ ಹೆಸರು ಬರುವುದಲ್ಲದೇ ರಾಜ್ಯ ಮತ್ತು ರಾಷ್ಟ್ರಕ್ಕೆ ಉತ್ತಮ ಸಂದೇಶವನ್ನು ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಕಾಂಗ್ರೇಸ್ ಪಕ್ಷವು ಕಾಂಗ್ರೆಸ್ ಪಕ್ಷದ ಮುಂಚೂಣಿ ಘಟಕಗಳ ಮುಖ್ಯಸ್ಥರು ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ನವೀನ ಕುಮಾರಿ. ಎಸ್.ರಾಜಣ್ಣ, ಚಂದ್ರಶೇಖರ್ ಮೂರ್ತಿ ಇತರರಿದ್ದರು.