ಛಲವಾದಿ ಕ್ಷೇಮಾಭಿವೃದ್ಧಿ ಸಂಘವು ಸಮುದಾಯದ ಪ್ರತಿಭಾವಂತ ವಿದ್ಯಾವಂತರಿಗೆ, ನೊಂದ ಅಧಿಕಾರಿಗಳಿಗೆ ನೆರವಾಗುವ ಸದುದ್ದೇಶದಿಂದ ಸ್ಥಾಪನೆಯಾಗಿದೆ, ಛಲವಾದಿ ಸಮುದಾಯದ ಸಂಘಟನೆಯಿಂದ ಹತ್ತಾರು ಸಮುದಾಯಗಳ ಸಂಘಟನೆಗಳು ಅಸ್ತಿತ್ವಕ್ಕೆ ಬಂದಿವೆ ಎಂದು ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಚಿದರಹಳ್ಳಿ ಮಹಾದೇವಸ್ವಾಮಿ ಹೇಳಿದರು.
ಮಂಡ್ಯದ ಕರ್ನಾಟಕ ಸಂಘದ ಕೆವಿಎಸ್ಎಸ್ಭವನದಲ್ಲಿ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಸಮಿತಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 67ನೇ ವರ್ಷದ ಪರಿನಿಬ್ಬಾಣ ದಿನ ಪ್ರಯುಕ್ತ ಭೀಮ ಸಂಕಲ್ಪ-2023ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆರ್ಥಿಕ ಮಟ್ಟ ಸುಧಾರಣೆ ಮತ್ತು ಉನ್ನತ ಶಿಕ್ಷಣ ಪಡೆಯುವವರಿಗೆ ಮಾರ್ಗದರ್ಶನ ನೀಡುವುದೇ ನಮ್ಮ ಧ್ಯೇಯವಾಗಿದೆ. ಪ್ರತಿ ಹಳ್ಳಿಯಲ್ಲಿರುವ ಛಲವಾದಿ ಸಮುದಾಯದ ಜನರನ್ನು ಜಾಗೃತಿ ಮೂಡಿಸಿ, ಅವರಿಗೆ ಆಶ್ರಯವಾಗಲು, ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳು ಮುಂದಾಗುತ್ತಾರೆ, ಸಾಧ್ಯವಾಗಿಲ್ಲ ಎಂದರೆ ರಾಜ್ಯ ಮಟ್ಟಡ ತಂಡ ಭೇಟಿ ನೀಡಿ ನ್ಯಾಯಕೊಡಿಸಲು ಮುಂದಾಗುತ್ತೇವೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಪಣಕನಹಳ್ಳಿ ಸಿದ್ದರಾಜು ಮಾತನಾಡಿ, ಭಾರತದೇಶದಲ್ಲಿ ಛಲವಾದಿ ಸಮುದಾಯವು 40 ಕೋಟಿ ಜನಸಂಖ್ಯೆ ಹೊಂದಿದೆ. ರಾಜ್ಯದಲ್ಲಿ 2 ಕೋಟಿ ಇದ್ದೇವೆ, 40 ಲಕ್ಷ, 50 ಲಕ್ಷ ಇರುವ ಸಮುದಾಯದ ಮಂದಿ ಈ ರಾಜ್ಯದಲ್ಲಿ ಆಡಳಿತ ಮಾಡಿದ್ದಾರೆ, 2 ಕೋಟಿ ಜನರಿರುವ ನಾವು ರಾಜ್ಯಾಧಿಕಾರ ಹಿಡಿಯಲಿಕ್ಕೆ ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.
ಭೀಮಸಂಕಲ್ಪ ಮಾಡದೆ ಯಾವ ಕಾರ್ಯವೂ ಸಾಧನೆ ಮಾಡಲು ಸಾಧ್ಯವಿಲ್ಲ, ವಿದ್ಯಾವಂತರು, ಕೆಲವು ನೌಕರರು ಸ್ವಾರ್ಥಕ್ಕಾಗಿ ಬದುಕುತ್ತಿದ್ದಾರೆ, ಸರ್ಕಾರ ಸೌಲಬ್ಯಗಳು ಇನ್ನೂ ಕಟ್ಟೆ ಕಡೆಯ ವ್ಯಕ್ತಿಗೆ ನೇರವಾಗಿ ತಲುಪುತ್ತಿಲ್ಲ, ಸುಲಭವಾಗಿ ಸೌಲಭ್ಯಗಳು ಸಿಗುವುದು ಕಷ್ಟಕರವಾಗಿದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಕಾರ್ಯದರ್ಶಿ ಶಿವಕುಮಾರ್, ಜಂಟಿ ಕಾರ್ಯದರ್ಶಿ ಕೃಷ್ಣಮೂರ್ತಿ, ಸಿದ್ದರಾಮಯ್ಯ, ಖಜಾಂಚಿ ಆನಂದ, ಮಿಮ್ಸ್ ವೈದ್ಯರಾದ ಡಾ.ಮನೋಹರ್, ಡಾ.ಸುದರ್ಶನ್, ಡಾ.ರಾಜಶೇಖರ್, ಜಿಲ್ಲಾ ಉಪಾಧ್ಯಕ್ಷ ಸುಧಾರ್ಶನ್, ಪ್ರ.ಕಾರ್ಯದರ್ಶಿ ಚಿಕ್ಕಸ್ವಾಮಿ, ಖಜಾಂಚಿ ಗಣೇಶ್, ಜಂಟಿಕಾರ್ಯದರ್ಶಿ ಸಿದ್ದಯ್ಯ, ಅಂದಾನಿ, ಕುಮಾರಸ್ವಾಮಿ, ಲೋಕೇಶ್ ಮತ್ತಿತರರಿದ್ದರು.