Friday, September 20, 2024

ಪ್ರಾಯೋಗಿಕ ಆವೃತ್ತಿ

ಕೇರಳ| ‘ನಮಗೆ ಕುಲಪತಿ ಬೇಕು, ಸಾವರ್ಕರ್‌ ಅಲ್ಲ’: ರಾಜ್ಯಪಾಲರ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

ಕೇರಳದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರದ ನಡುವಿನ ಕಿತ್ತಾಟ ಸದ್ಯಕ್ಕೆ ಕೊನೆಗೊಳ್ಳುವ ಲಕ್ಷಣ ಕಾಣುತಿಲ್ಲ.

ತಮ್ಮನ್ನು ಗೂಂಡಾಗಳು, ಕ್ರಿಮಿನಲ್‌ಗಳು ಎಂದಿರುವ ರಾಜ್ಯಪಾಲರ ವಿರುದ್ಧ ರೊಚ್ಚಿಗೆದ್ದಿರುವ ಸ್ಟೂಡೆಂಟ್ ಫೆಡರೇಶನ್‌ ಆಫ್ ಇಂಡಿಯಾ(ಎಸ್‌ಎಫ್‌ಐ) ಕಾರ್ಯಕರ್ತರು, ಕಳೆದ ಒಂದು ವಾರದಿಂದ ರಾಜ್ಯಪಾಲರು ಹೋದಲ್ಲಿ ಬಂದಲ್ಲಿ ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟಿಸುತ್ತಿದ್ದಾರೆ.

ಕಳೆದ ಮಂಗಳವಾರ ರಾಜ್ಯಪಾಲರು ಚಿಕಿತ್ಸೆಯ ಸಲುವಾಗಿ ತಿರುವನಂತಪುರಂನ ಮೆಡಿಕಲ್‌ ಕಾಲೇಜಿಗೆ ತೆರಳಿದ್ದರು. ಈ ವಿಷಯ ತಿಳಿದು ಕಾಲೇಜು ಬಳಿ ಬಂದ ಎಸ್‌ಎಫ್‌ಐ ಕಾರ್ಯಕರ್ತರು, ‘ನಮಗೆ ಕುಲಪತಿ ಬೇಕು, ಸಾವರ್ಕರ್ ಅಲ್ಲ’ ಎಂಬ ಬ್ಯಾನರ್ ಪ್ರದರ್ಶಿಸಿ ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಈ ಪ್ರತಿಭಟನೆ ದೇಶದ ಗಮನ ಸೆಳೆದಿದೆ.

ರಾಷ್ಟ್ರಪತಿ, ಪ್ರಧಾನಿಗೆ ಪತ್ರ ಬರೆದ ಸಿಎಂ

ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ವಾಪಸ್‌ ಕರೆಸಿಕೊಳ್ಳಿ ಎಂದು ಆಗ್ರಹಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಗುರುವಾರ ಸಿಎಂ ಪಿಣರಾಯಿ ವಿಜಯನ್‌ ಪತ್ರ ಬರೆದಿದ್ದಾರೆ. ರಾಜ್ಯಪಾಲರು ಸಾಂವಿಧಾನಿಕ ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಪದೇ ಪದೇ ಶಿಷ್ಟಾಚಾರ ಉಲ್ಲಂಘಿಸುತ್ತಿದ್ದಾರೆ ಎಂದು ಸಿಎಂ ತನ್ನ ಪತ್ರದಲ್ಲಿ ಆರೋಪಿಸಿದ್ದಾರೆ.

ಡಿಸೆಂಬರ್ 11ರಂದು ಆಡಳಿತಾರೂಢ ಸಿಪಿಐ(ಎಂ)ನ ವಿದ್ಯಾರ್ಥಿ ಘಟಕವಾದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ಕಾರಿಗೆ ಮುತ್ತಿಗೆ ಹಾಕಿದ್ದರು.

ರಾಜ್ಯಪಾಲರು ದೆಹಲಿಗೆ ಪ್ರಯಾಣಿಸಲು ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ತೆರಳುವ ದಾರಿ ಮಧ್ಯೆ ಈ ಘಟನೆ ನಡೆದಿತ್ತು. ತಕ್ಷಣ ಕಾರಿನಿಂದ ಕೆಳಗಿಳಿದಿದ್ದ ರಾಜ್ಯಪಾಲರು, ಸಿಎಂ ಕಳಿಸಿದ ಗೂಂಡಾಗಳು ನನ್ನ ಮೇಲೆ ದಾಳಿಗೆ ಯತ್ನಿಸಿದ್ದಾರೆ. ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡುವ ಉದ್ದೇಶ ಅವರಿಗಿತ್ತು ಎಂದು ಮಾಧ್ಯಮಗಳ ಮುಂದೆ ಹೇಳಿದ್ದರು.

ತಮ್ಮ ಮೇಲೆ ಆರೋಪ ಹೊರಿಸಿದ ರಾಜ್ಯಪಾಲರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಎಸ್‌ಎಫ್‌ಐ ಕಾರ್ಯಕರ್ತರು, ಕ್ಯಾಲಿಕಟ್ ವಿಶ್ವ ವಿದ್ಯಾನಿಯಲದ ಅತಿಥಿ ಗೃಹದಲ್ಲಿ ರಾಜ್ಯಪಾಲರು ವಾಸ್ತವ್ಯ ಹೂಡಿದ್ದ ವೇಳೆ, ವಿವಿಯ ಹೊರಗಡೆ ಕಪ್ಪು ಬಟ್ಟೆಗಳನ್ನು ಕಟ್ಟಿ ಪ್ರತಿಭಟನೆ ನಡೆಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ರಾಜ್ಯಪಾಲರು, “ಅವರು(ಎಸ್‌ಎಫ್‌ಐ ಕಾರ್ಯಕರ್ತರು) ಸಿಎಂ ಕಡೆಯ ಕ್ರಿಮಿನಲ್‌ಗಳು, ಗೂಂಡಾಗಳು ಎಂದಿದ್ದರು. ರಾಜ್ಯಪಾಲರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಸಿಎಂ ಪಿಣರಾಯಿ ವಿಜಯನ್, ರಾಜ್ಯಪಾಲರು ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದರು.

ಇದರ ಬಳಿಕ ರಾಜ್ಯಪಾಲರು ತಿರುವನಂತಪುರಂನ ಮೆಡಿಕಲ್‌ ಕಾಲೇಜಿಗೆ ಹೋಗಿದ್ದಾಗ ಎಸ್‌ಎಫ್‌ಐ ಕಾರ್ಯಕರ್ತರು ವಿಶೇಷ ಪ್ರತಿಭಟನೆ ನಡೆಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!