Thursday, September 19, 2024

ಪ್ರಾಯೋಗಿಕ ಆವೃತ್ತಿ

ನೆಲದನಿ ಬಳಗದಿಂದ ಕುಟುಂಬ ಸಮೇತ ರಕ್ತದಾನ ಶಿಬಿರ

ಮಂಡ್ಯದಲ್ಲಿ ಇಂದು ನೆಲದನಿ ಬಳಗದಿಂದ ಕುಟುಂಬ ಸಮೇತ ರಕ್ತದಾನ ಶಿಬಿರವನ್ನು ಮಂಡ್ಯದ ರಕ್ತನಿಧಿ ಕೇಂದ್ರದಲ್ಲಿ ಏರ್ಪಡಿಸಲಾಗಿತ್ತು.

ನೆಲದನಿ ಬಳಗವು ಹಲವಾರು ವರ್ಷಗಳಿಂದ ಪರಿಸರ ಸ್ಣೇಹಿ ಕಾರ್ಯಕ್ರಮವನ್ನು ಮಂಡ್ಯದಲ್ಲಿ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಸಸಿ ನೆಡುವ ಕಾರ್ಯಕ್ರಮ, ರಕ್ತದಾನ ಕಾರ್ಯಕ್ರಮ ಮತ್ತು ಕರೋನಾ ಸಂದರ್ಭದಲ್ಲಿ ಮಂಡ್ಯದ ಕಾಳಪ್ಪ ಬಡಾವಣೆಯನ್ನು  ದತ್ತು ತೆಗೆದುಕೊಂಡು ಆ ಸಂದರ್ಭದಲ್ಲಿ ನೆರವಾಗಿತ್ತು.

ನೆಲದನಿ ಬಳಗವು ಸಾಮಾಜಿಕ ನ್ಯಾಯದ ಬಗೆಗಿನ ನಾಟಕಗಳು, ಸಾಂಸ್ಕ್ರತಿಕ ಕಾರ್ಯಕ್ರಮ ಮತ್ತು ಮಂಡ್ಯದಲ್ಲಿ ಯುವಕರನ್ನು ಸಂಘಟಿಸಿ, ಒಂದು ಆದರ್ಶ ತಂಡವಾಗಿ ನಿರಂತರವಾಗಿ ತನ್ನ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಲಿದೆ.

ಈ ಬಾರಿ ದ್ವೀತಿಯ ವರ್ಷದ ಕುಟುಂಬ ಸಮೇತ ರಕ್ತದಾನ ಶಿಬಿರದ ಕಾರ್ಯಕ್ರಮದ ಜೊತೆಗೆ ನೆಲದನಿ ಬಳಗದ ಮಕ್ಕಳ, ಕಾರ್ಯಕರ್ತರ ಜನುಮ ದಿನ ಮುಖಂಡರ ವಿವಾಹ ವಾ‍ರ್ಷಿಕೋತ್ಸವವು ಕೂಡ ಸಾಂಧರ್ಭಿಕವಾಗಿತ್ತು.

ಇದೇ ಸಂಧರ್ಭದಲ್ಲಿ ರಕ್ತನಿಧಿ ಕೇಂದ್ರದ ಹೊರ ಭಾಗದಲ್ಲಿ ನೆಲದನಿ ಬಳಗದ ವತಿಯಿಂದ ಸಸಿ ನೆಡುವ ಕಾರ್ಯಕ್ರಮದ ಮೂಲಕ ರಕ್ತದಾನ ಶಿಬಿರವು ಪ್ರಾರಂಭವಾಯಿತು.

ಮಿಮ್ಸ್ ವೈದ್ಯಕೀಯ ಅಧೀಕ್ಷರಾದ ಡಾ:ಶ್ರೀಧರ್ ಮಾತನಾಡಿ, ಕುಟುಂಬ ಸಮೇತ ರಕ್ತದಾನ ಶಿಬಿರದ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಂಡು ಬರಲಿ ಎಂದು ಹಾರೈಸಿದರು. ‍ಈ ಕಾರ್ಯಕ್ರಮ ತುಂಬಾ ಪ್ರೇರಣೆ ನೀಡುವಂತಹದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕು ಎಂದು ಕೇಳಿಕೊಂಡರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವೈದ್ಯಾಧಿಕಾರಿಗಳಾದ ಮಾದೇಶ್ ಮಾತನಾಡಿ ಎಲ್ಲರೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ತಿಳಿಸಿದರು. ನೆಲದನಿ ಬಳಗದ ಲಂಕೇಶ್ ತಂಡ ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಬಹಳ ಶ್ಲಾಘನೀಯ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಾನ್ ವ್ಯಕ್ತಿಗಳಾದ ಕುವೆಂಪು, ಅಂಬೇಢ್ಕರ್ ಜಯಂತಿ, ವಿವೇಕನಂದರ ಜಯಂತಿ, ಪರಿನಿರ್ವಾಣದ ದಿನ ಇಂತಹ ಕಾರ್ಯಕ್ರಮಗಳಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕು, ಇನ್ನೊಬ್ಬರಿಗೆ ಸಹಾಯ ಮಾಡುವ ಕೆಲಸ ಮಾಡಬೇಕು. ರಕ್ತದಾನ ಮಾಡುವ ವಿಚಾರದಲ್ಲಿರುವ ಮೂಢ ನಂಬಿಕೆಗಳನ್ನು ಬಿಡಬೇಕು, ಎಲ್ಲರು ಬಂದು ರಕ್ತದಾನ ಮಾಡಬೇಕು ಎಂದು ಹೇಳಿದರು.

ರಕ್ತದಾನ ಮಾಡುವುದರಿಂದ, ರಕ್ತದಲ್ಲಿರುವ ಕೊಬ್ಬಿನಂಶ ಕಡಿಮೆಯಾಗುತ್ತದೆ, ಹೃದಯಘಾತ ಅಗುವುದು ಕಡಿಮೆಯಾಗುತ್ತದೆ. ಎಲ್ಲರೂ ಒಂದು ಜೀವ ಉಳಿಸುವ ನಿಟ್ಟಿನಲ್ಲಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಬೇಕು, ಭಾರತದಲ್ಲಿ ರಕ್ತದ ಕೊರತೆ ಇದೆ, ಯುವಕರು ರಕ್ತದಾನ ಮಾಡಿದರೆ, ವಿವಿಧ ರೀತಿಯ ಚಿಕಿತ್ಸೆಗೆ ದಾಖಲಾಗುವವರಿಗೆ ಅನುಕೂಲವಾಗುತ್ತದೆ ಎಂದರು. ಇಂತಹ ಕಾರ್ಯಕ್ರಮಗಳು ನವ ಭಾರತದ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದರು.

ಕರ್ನಾಟಕ ಜನಶಕ್ತಿಯ ಸಿದ್ದರಾಜು ಮಾತನಾಡಿ , ನೆಲದನಿ ಬಳಗದ ಈ ಕಾರ್ಯಕ್ರಮವು ಸಮಾಜಕ್ಕೆ ಮಾದರಿಯಾಗುತ್ತದೆ ಎಂದರು. ನೆಲದನಿ ಬಳಗದ ಲಂಕೇಶ್ ರವರು ತಮ್ಮ ವಿವಾಹದ ಸಂಧರ್ಭದಲ್ಲೂ ರಕ್ತದಾನ ಮಾಡಿ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಿದ್ದಾರೆ, ಅವರನ್ನು ಒಳ್ಳೆಯ ಆದರ್ಶ ದಂಪತಿಗಳು ಎಂದು ಈ ಸಂದರ್ಭದಲ್ಲಿ ಹೇಳಬಹುದು. ಕುವೆಂಪುರವರ ಸಂದೇಶ ಮನುಷ್ಯ ಜಾತಿ ತಾನೊಂದೇ ವಲಂ ಎಂಬ ಕೀರ್ತಿಯು ನಿಜವಾಗಲೂ ನೆಲದನಿ ಬಳಗಕ್ಕೆ ಸಲ್ಲಬೇಕು ಎಂದರು. ಇಂತಹ ಕಾರ್ಯಕ್ರಮಗಳು ರಾಜ್ಯಾದ್ಯಂತ ವಿಸ್ತಾರವಾಗಬೇಕೆಂದರು.

ನೆಲದನಿ ಬಳಗದ ಲಂಕೇಶ್ ರವರು ಪ್ರತಾಪ್ ರವರಿಗೆ ಜನುಮ ದಿನದ ಶುಭಾ‍ಷಯವನ್ನು ಕೋರಿದರು. ಅದೇ ರೀತಿ ನೆಲದನಿ ಬಳಗದ ಚಿಗುರುಗಳಾದಂತಹ ಚಿರು ಮತ್ತು ಚಿನ್ಮಯ ಗೆ ಜನುಮ ದಿನದ ಶುಭಾ‍‍ಷಯವನ್ನು ಕೋರಿದರು. ಇದೇ ಸಂದರ್ಭದಲ್ಲಿ ಮಿಮ್ಸ್ ನ ವೈದ್ಯಾಧಿಕಾರಿಗಳಾದ ಶ್ರೀಧರ್ ರವರಿಗೆ ರಕ್ತದಾನಿಗಳಿಗೆ ಒಂದು ಸಭಾಂಗಣ ಮಾಡಿದರೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.

ಪ್ರಸ್ತುತ ಸಮಾಜದ ವ್ಯವಸ್ಥೆಯು ಜಾತಿ ಮತ್ತು ಧರ್ಮಗಳ ನಡುವೆ ಕಲುಷಿತವಾಗಿ ಹರಿದಾಡುತ್ತಿದೆ ಇವೆಲ್ಲವನ್ನು ಮೆಟ್ಟಿ ನಿಲ್ಲಬೇಕೆಂದು, ಕಳೆದ 20 ವರ್ಷಗಳಿಂದ ಕುವೆಂಪುರವರ ವಿಶ್ವಮಾನವ ಸಂದೇಶ ಮತ್ತು ಸಮನ್ವಯದ ದೃಷ್ಟಿ ಕೋನದ ಅಡಿಯಲ್ಲಿ ನೆಲದನಿ ಬಳಗವು ಕೆಲಸ ಮಾಡಿಕೊಂಡು ಬರುತ್ತಿದೆ. ಆದರ್ಶಗಳು ನಿತ್ಯ ಉಸಿರಾಗಿರಬೇಕು, ನಾವು ಮಾಡುವ ಕೆಲಸಗಳು ಆದರ್ಶವಾಗಿರಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ: ಎಂ.ಕೆಂಪಮ್ಮನವರು, ವೈಚಾರಿಕ ತತ್ವವನ್ನು ಆದರ್ಶವಾಗಿಟ್ಟುಕೊಂಡು ಹೋಗುತ್ತಿರುವ ಈ ಯುವ ಸಮೂಹ, ನಡೆಸುತ್ತಿರುವ ಮಾರ್ಗಗಳು, ಕ್ರಮಿಸುತ್ತಿರುವ ಮಾರ್ಗಗಳನ್ನು ನೋಡಿದರೆ, ದೇಶಕ್ಕೆ ಒಂದು ಒಳ್ಳೆ ಭವಿಷ್ಯ ಇದೆ ಎನ್ನುವುದನ್ನು, ಇವತ್ತಿನ ಯುವ ಜನಾಂಗ ಯಾವ ದಾರಿಯಲ್ಲಿ ಹೋಗಬೇಕು ಎನ್ನುವ ಆದರ್ಶವನ್ನು ಇಲ್ಲಿ ಇರುವ ಎಲ್ಲಾ ಬಳಗದ ಸದಸ್ಯರು ಮಾಡಿದ್ದಾರೆ, ಗೊಡ್ಡು ಸಂಪ್ರದಾಯವನ್ನು ಮುರಿದು ಸಮಾಜಮುಖಿ ಕಾರ್ಯಕ್ರಮ ಮಾಡುತ್ತಿರುವ ಈ ಬಳಗಕ್ಕೆ ಯಶಸ್ಸು ಸಿಗಲಿ, ಇನ್ನೂ ಮುಂದಿ ಈ ರೀತಿಯ ಕಾರ್ಯಕ್ರಮಗಳು ಹೆಚ್ಚಾಗಲಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನೆಲದನಿ ಬಳಗದ ಅಧ್ಯಕ್ಷ ಎಂ.ಸಿ.ಲಂಕೇಶ್ ರವರು 60 ನೇ ಬಾರಿ, ಕಾರ್ಯದರ್ಶಿ ಯೋಗೇಶ್ 43ನೇ ಬಾರಿ, ನಿರ್ದೇಶಕ ಪ್ರತಾಪ್ 29ನೇ ಬಾರಿ ರಕ್ತದಾನ ಮಾಡಿದರು.

ಡಾ. ಆಶಾಲತಾರವರು ಮಾತನಾಡಿ,  ನೆಲದನಿ ಬಳಗದವರು ರಕ್ತದಾನ ಶಿಬಿರಗಳನ್ನು ಮಾಡುತ್ತಿದ್ದಾರೆ, ರಕ್ತದಾನ ಮಾಡಿದರೆ ಜೀವದಾನ ಮಾಡಿದ ಹಾಗೆ, ರಕ್ತನಿಧಿ ಕೇಂದ್ರ ದಲ್ಲಿ  ರಕ್ತವು ಎಷ್ಟಿದ್ದರೂ ಅದು ಸಾಲದಾಗಿದೆ. ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ರಕ್ತದ ಅವಶ್ಯಕತೆ ಇದೆ. ವಿಭಿನ್ನವಾಗಿ ಆಚರಿಸುತ್ತಿರುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದರು.

ಈ ಕಾರ್ಯಕ್ರಮದಲ್ಲಿ ನೆಲದನಿ ಬಳಗದ ಸುನೀತ್ ಲಂಕೇಶ್, ರತ್ನಾ ಜೈನ್,  ಮಹಾಲಕ್ಷ್ಮಿ ಕೋಮಲ್ ಕುಮಾರ್ ರವರು, ಪ್ರತಾಪ್ ಮತ್ತು ಯೋಗೇಶ್ ದಂಪತಿಗಳು, ಕರ್ನಾಟಕ ಜನಶಕ್ತಿಯ ಪೂರ್ಣಿಮಾ ಮತ್ತಿತ್ತರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!