ಕೆಎಸ್ಆರ್’ಟಿಸಿ ಬಸ್ಸಿನಲ್ಲಿ ಪ್ರಯಾಣಿಸುವಾಗ ತಾಯಿಯೊಬ್ಬರಿಂದ ಏಳು ತಿಂಗಳ ಮಗು ಪಡೆದುಕೊಂಡಿದ್ದ ಅಪರಿಚಿತ ಮಹಿಳೆಯೊಬ್ಬರು ಬಸ್ ಇಳಿದು ಮಗುವಿನೊಂದಿಗೆ ಪರಾರಿಯಾಗಿರುವ ಘಟನೆ ಮಳವಳ್ಳಿ ಬಸ್ ನಿಲ್ದಾಣದ ಬಳಿ ಸೋಮವಾರ ಸಂಜೆ ನಡೆದಿದೆ.
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ವಡ್ಡರಕೊಪ್ಪಲು ಗ್ರಾಮದ ಶಿವಕುಮಾರ್ ಎಂಬುವರ ಪತ್ನಿ ಸವಿತಾ ತನ್ನ ಮಗು ಕಳೆದುಕೊಂಡ ತಾಯಿ.
ಈಕೆ ಚನ್ನಪಟ್ಟಣದ ಬಸ್ ನಿಲ್ದಾಣದಲ್ಲಿ ತನ್ನ ಏಳು ತಿಂಗಳ ಗಂಡು ಮಗುವಿನೊಂದಿಗೆ ಕೆಎಸ್ಆರ್ಟಿಸಿ ಬಸ್ ಹತ್ತಿ, ಗಂಡನ ಮನೆಗೆ ಬರುತ್ತಿದ್ದರು, ಬಸ್ನಲ್ಲಿ ಪ್ರಯಾಣಿಕರು ಹೆಚ್ಚಿದ್ದ ಕಾರಣ ಸೀಟ್ನಲ್ಲಿ ಕುಳಿತ್ತಿದ್ದ ಮಹಿಳೆಯೊಬ್ಬಳು ಮಗುವನ್ನು ಪಡೆದುಕೊಂಡಿದ್ದರು. ಬೇರೊಂದು ಬಸ್ಗೆ ಹೋಗಬೇಕೆಂದು ಪಟ್ಟಣದ ನಿಲ್ದಾಣದಲ್ಲಿ ಬಸ್ನಿಂದ ಇಳಿಯಲು ಸವಿತಾ ಮುಂದಾದರು. ಆಗ ಅಪರಿಚಿತ ಮಹಿಳೆಯೂ ತಾನು ಕೆಳಗೆ ಇಳಿಯುವುದಾಗಿ ತಿಳಿಸಿ ಮಗುವಿನ ತಾಯಿ ಸವಿತಾ ಕೈಯಲ್ಲಿ ಲಗ್ಗೇಜ್ ಇದ್ದುದ್ದರಿಂದ ಬಸ್ನಿಂದ ಕೆಳೆಗಿಳಿಯುವಷ್ಟರಲ್ಲಿ, ಮಗುವಿನೊಂದಿಗೆ ನಾಪತ್ತೆಯಾಗಿದ್ದಾಳೆ. ಎಲ್ಲೆಡೆ ಹುಡುಕಾಡಿದರೂ ತನ್ನ ಮಗು ಕಾಣದಿರುವುದನ್ನು ಅರಿತ ತಾಯಿ ಅಳುತ್ತಾ ಕೂಗಿಕೊಂಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಸವಿತಾ ಅವರನ್ನು ಸಮಾಧಾನಪಡಿಸಿ ಠಾಣೆಗೆ ಕರೆದೊಯ್ದು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ತನಿಖೆ ಕೈಗೊಂಡಿದ್ದಾರೆ.