ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಕೆರಗೋಡಿನಿಂದ ಮಂಡ್ಯದವರಗೆ ಪಾದಯಾತ್ರೆ ನಡೆಸುವ ಸಂದರ್ಭದಲ್ಲಿ ಮಂಡ್ಯನಗರದ ಕುರುಬರ ಹಾಗೂ ಸಂಘದ ಕಚೇರಿಯ ಮೇಲೆ ಕಲ್ಲು ತೂರಾಟ ನಡೆಸಿ, ಸಂಗೊಳ್ಳಿ ರಾಯಣ್ಣ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಫ್ಲೆಕ್ಸ್ ಹರಿದು ದಾಂಧಲೆ ನಡೆಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಕೆ.ಆರ್.ಪೇಟೆ ಕುರುಬ ಸಮಾಜದ ಅಧ್ಯಕ್ಷ ಕೆ.ಪುರುಷೋತ್ತಮ್ ಮತ್ತು ರವೀಂದ್ರಬಾಬು ಒತ್ತಾಯಿಸಿದರು.
ಕಿಡಿಗೇಡಿಗಳು ಮಂಡ್ಯದ ಪ್ರದೇಶ ಕುರುಬರ ಸಂಘದ ಕಛೇರಿಗೆ ನುಗ್ಗಿ ದಾಂ ಧಲೆ ನಡೆಸಿ ಕೊಠಡಿಗಳ ಮೇಲೆ ಕಲ್ಲು ತೂರಾಟ ನಡೆಸಿ ಗಾಜುಗಳನ್ನು ಒಡೆದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಫ್ಲೆಕ್ಸ್ ಹರಿದುಹಾಕಿದ ಘಟನೆಯನ್ನು ತೀವ್ರವಾಗಿ ಖಂಡಿಸಿದ ತಾಲೂಕು ಕುರುಬ ಸಮಾಜದ ಮುಖಂಡರು, ದಾಂಧಲೆ ನಡೆಸಿದ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಪತ್ರಿಕಾಗೋಷ್ಠಿ ನಡೆಸಿ ತಹಸೀಲ್ದಾರ್ ನಿಸರ್ಗಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು.
ಮುಡಾ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ಜಿ.ಪಂ. ಮಾಜಿ ಸದಸ್ಯರಾದ ಕೊಡಿಮಾರನಹಳ್ಳಿ ದೇವರಾಜು, ಬಿ.ನಾಗೇಂದ್ರ ಕುಮಾರ್, ಎಲ್.ಕೆ. ಮಂಜುನಾಥ್ ಮಾತನಾಡಿ, ಹನುಮ ಧ್ವಜದ ಹೆಸರಿನಲ್ಲಿ ದಾಂಧಲೆ ನಡೆಸಿ, ಗಲಾಟೆ ಮಾಡಿ ಸಮಾಜದ ನೆಮ್ಮದಿಯನ್ನು ಹಾಳು ಮಾಡಲು ಹೊರಟಿರುವ ದುಷ್ಟಶಕ್ತಿಗಳು ಹಾಗೂ ಕಿಡಿಗೇಡಿಗಳು ಮಂಡ್ಯವನ್ನು ಮಂಗಳೂರು ಮಾಡಲು ಹೊರಟಿದ್ದಾರೆ. ಮಂಡ್ಯ ಜಿಲ್ಲೆಯ ಜನರು ಶಾಂತಿಪ್ರಿಯರಾಗಿದ್ದು ಕೋಮುವಾಧಿಗಳ ಆಟಾಟೋಪಗಳಿಗೆ ಕಿವಿಗೊಡುವುದಿಲ್ಲ. ಹೊರಗಿನಿಂದ ಜಿಲ್ಲೆಗೆ ಬಂದು ಮಂಡ್ಯದ ಜನರ ನೆಮ್ಮದಿ ಹಾಳುಮಾಡಲು ಹೊರಟಿರುವ ದುಷ್ಟ ಶಕ್ತಿಗಳನ್ನು ಪೊಲೀಸರು ಮಟ್ಟ ಹಾಕಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಕುರುಬ ಸಮಾಜದ ಮುಖಂಡರು ಆಗ್ರಹಿಸಿದರು.
ಗೋಷ್ಟಿಯಲ್ಲಿ ತಾಪಂ ಮಾಜಿ ಸದಸ್ಯರಾದ ಶಾಮಣ್ಣ, ಸಣ್ಣಲಿಂಗೇಗೌಡ, ದರಖಾಸ್ತು ಕಮಿಟಿ ಸದಸ್ಯ ರಾಯಪ್ಪ, ಪುರಸಭೆ ಸದಸ್ಯರಾದ ಕೆ.ಆರ್. ರವೀಂದ್ರಬಾಬು, ಸ್ನೇಹಿತ ರಮೇಶ್, ಶಕುಂತಲಾ ರವಿಕುಮಾರ್, ವಿನೋದ್ ಕುಮಾರ್, ಮುಖಂಡರಾದ ಚಂದ್ರೆಗೌಡ, ದಿವಾಕರ್, ಕಾಡುಮೆಣಸ ಚಂದ್ರು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.