ಸಾರ್ವಜನಿಕರಿಗೆ ಉಪಯುಕ್ತವಾಗುವ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದು ಪಾರದರ್ಶಕವಾಗಿ ಅನುಷ್ಠಾನ ಮಾಡಲು ಸದಾ ಬದ್ಧವಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.
ಕೆ.ಆರ್.ಪೇಟೆ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಲಾಗಿದ್ದ ಗ್ಯಾರಂಟಿ ಸಮಾವೇಶ ಹಾಗೂ ಸರ್ಕಾರದ ಯೋಜನನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪೌತಿ ಖಾತೆ, ಆರ್.ಟಿ.ಸಿ ತಿದ್ದುಪಡಿ, ಈ ಸ್ವತ್ತು ಸೇರಿದಂತೆ ಹಲವಾರು ಜನಪರ ಕೆಲಸಗಳನ್ನು ಪಕ್ಷತೀತವಾಗಿ ಮಾಡಲಾಗುತ್ತಿದೆ. ನಿರಂತರವಾಗಿ ಸರ್ವಜನಿಕ ಸಮಸ್ಯೆಗಳಿಗೆ ಜಿಲ್ಲಾಡಳಿತ ಸ್ಪಂದಿಸಿ ಕೆಲಸ ನಿರ್ವಹಿಸುತ್ತಿದೆ. ಸರ್ಕಾರ ಪಕ್ಷತೀತವಾಗಿ ಎಲ್ಲಾ ಶಾಸಕರಿಗೆ ತಮ್ಮ ಕ್ಷೇತ್ರದ ಅಭಿವೃದ್ಧಿಗೆ 10 ಕೋಟಿ ರೂ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿರುವ ನೀರಾವರಿ ಸಮಸ್ಯೆಗಳ ಬಗ್ಗೆ ಮಾಚ್೯ ನಂತರ ಚರ್ಚಿಸಿ ಸರ್ಕಾರಕ್ಕೆ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು, ಚುನಾವಣೆಗೂ ಮೊದಲು ಪ್ರಣಾಳಿಕೆಯಲ್ಲಿ ನೀಡಲಾಗಿರುವ ಭರವಸೆಯನ್ನು ಹಂತ ಹಂತವಾಗಿ ಪೂರೈಸಲಾಗುವುದು ಎಂದರು.
ಸರ್ಕಾರದ ವತಿಯಿಂದ ನೀಡಲಾಗಿರುವ 5 ಗ್ಯಾರಂಟಿ ಎಲ್ಲಾ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಬ್ಯಾಂಕ್ ಖಾತೆ ಆಧಾರ್ ಲಿಂಕ್ ಸೇರಿದಂತೆ ಗ್ಯಾರಂಟಿ ಯೋಜನೆಗಳು ಪಡೆಯಲು ತೊಂದರೆಯಿದ್ದಲ್ಲಿ ಸರಿಪಡಿಸಿಕೊಡಲು ಎಲ್ಲಾ ತಾಲ್ಲೂಕುಗಳಲ್ಲಿ ಸರ್ಕಾರದ ವತಿಯಿಂದ ಗ್ಯಾರಂಟಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ 4,36,000 ಕುಟುಂಬಗಳಿಗೆ 5 ಕೆ.ಜಿ. ಅಕ್ಕಿ ಹಾಗೂ 5 ಕೆ.ಜಿ ಅಕ್ಕಿಗೆ ರೂ 170 ರಂತೆ ಒಟ್ಟು 137 ಕೋಟಿ ರೂ ಹಣ ಡಿ.ಬಿ.ಟಿ ಮೂಲಕ ಪಾವತಿಸಲಾಗಿದೆ ಎಂದರು.
ಕೆ.ಆರ್.ಪೇಟೆಯಲ್ಲಿ 64,422 ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆ, ಗೃಹ ಲಕ್ಷಿ ಯೋಜನೆಯಡಿ 65,000 ಮಹಿಳೆಯರಿಗೆ ರೂ 2000 ನೀಡಲಾಗುತ್ತಿದೆ ಗೃಹ ಜ್ಯೋತಿ ಯೋಜನೆಯನ್ನು 65000 ಕುಟುಂಬಗಳು ಪಡೆಯುತ್ತಿದ್ದಾರೆ ಎಂದರು.
ಯುವನಿಧಿ ಯೋಜನೆಯಡಿ ನೊಂದಣಿಯನ್ನು ಚುರುಕುಗೊಳಿಸಿ ಎಲ್ಲಾ ಅರ್ಹಫಲಾನುಭವಿಗಳು ಹೆಸರು ನೊಂದಾಯುಸಿಕೊಳ್ಳಿ ಎಂದರು. ಮಾಚ್೯ ಅಂತ್ಯದವರೆಗೆ 5 ಗ್ಯಾರಂಟಿಗಳಿಗೆ 56 ಸಾವಿರ ಕೋಟಿ ರೂ ಅನುದಾನ ಬೇಕಾಗುತ್ತದೆ. ಈ ಐದು ಯೋಜನೆಗಳ ಮೂಲಕ ಒಂದು ಕುಟುಂಬಕ್ಕೆ ಕನಿಷ್ಠ 5000 ರೂ ದೊರಕುತ್ತದೆ ಎಂದು ಅಂದಾಜಿಸಲಾಗಿದೆ. ಮುಂದಿನ ಸಾಲಿನಲ್ಲಿ 69 ಸಾವಿರ ಕೋಟಿ ರೂ ಐದು ಗ್ಯಾರಂಟಿಗಳಿಗೆ ಬೇಕಾಗುತ್ತದೆ. ಗ್ಯಾರಂಟಿ ಗಳಿಗೆ ಮೀಸಲಾಗಿರುವ ಅನುದಾನ ನೇರವಾಗಿ ಯಾವುದೇ ಮದ್ಯವರ್ತಿಗಳಿಲ್ಲದೇ, ಸಾರ್ವಜನಿಕರು ಯಾವುದೇ ಕಚೇರಿಗೆ ಅಲೆದಾಟ ನಡೆಸದೇ ನೇರವಾಗಿ ಸಾರ್ವಜನಿಕರಿಗೆ ಅವರ ಖಾತೆಗೆ ತಲುಪುವಂತೆ ಯೋಜನೆ ರೂಪಿಸಲಾಗಿದೆ ಎಂದರು.
ಸಹಕಾರ ಇಲಾಖೆ ವತಿಯಿಂದ ಬಡ್ಡಿ ರಹಿತವಾಗಿ ನೀಡಲಾಗುವ ಸಾಲದ ಬಡ್ಡಿಯನ್ನು ಸರ್ಕಾರ ಪಾವತಿಸುತ್ತದೆ. ಇದೇ ಸಂದರ್ಭದಲ್ಲಿ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಟಿ ಮಂಜು, ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ. ಕುಮಾರ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವಿರ್ ಆಸಿಫ್, ತಹಶೀಲ್ದಾರ್ ನಿಸರ್ಗಪ್ರಿಯ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು