ವರದಿ : ಪ್ರಭು ವಿ ಎಸ್
ಆಕಸ್ಮಿಕ ವಿದ್ಯುತ್ ತಗುಲಿ ಎರಡು ಮಂಗಳು ಮೃತಪಟ್ಟು, ಆ ಪೈಕಿ ಒಂದು ಮಂಗ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಘಟನೆ ಮದ್ದೂರು ಪಟ್ಟಣದ ಅಂಚೆ ಇಲಾಖೆ ಕಚೇರಿ ಬಳಿ ಗುರುವಾರ ಬೆಳಿಗ್ಗೆ ಜರುಗಿದ್ದು, ತಕ್ಷಣ ಸಾರ್ವಜನಿಕರು ಮಂಗವನ್ನು ಹೊತ್ತೊಯ್ದು ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.
ಪಟ್ಟಣದ ತರಕಾರಿ ಮಂಡಿ ಬಳಿ ಎಂದಿನಂತೆ ದಿನನಿತ್ಯದ ತರಕಾರಿ, ಹಣ್ಣು ಹಂಪಲುಗಳನ್ನು ತಿನ್ನಲು ಅಂಚೆ ಕಚೇರಿ ಬಳಿಯ ಬೃಹದಾಕಾರದ ಮರ ಮತ್ತು ವಿದ್ಯುತ್ ತಂತಿಗಳ ಮೂಲಕ ಸಂಚರಿಸುತ್ತಿದ್ದ ವೇಳೆ ಆಕಸ್ಮಿಕ ವಿದ್ಯುತ್ ತಗುಲಿ ಸ್ಥಳದಲ್ಲೇ ಎರಡು ಮಂಗಗಳು ಮೃತಪಟ್ಟಿದ್ದವು. ಒಂದು ಮಂಗ ತೀವ್ರವಾಗಿ ಅಸ್ವಸ್ಥಗೊಂಡಿತ್ತು. ತಕ್ಷಣ ಆ ಮಂಗವನ್ನು ಸ್ಥಳೀಯ ಸಾರ್ವಜನಿಕರು ಪಶು ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ಕೊಡಿಸಿ ಸಾವಿನ ದವಡೆಯಿಂದ ತಪ್ಪಿಸಿದ್ದಾರೆ.
ಪಶು ವೈದ್ಯ ಡಾ.ಶಿವಶಂಕರ್ ಮತ್ತು ಸಿಬ್ಬಂದಿಗಳು ಒಂದು ಗಂಟೆಗೂ ಹೆಚ್ಚು ಕಾಲ ತೀವ್ರ ಅಸ್ವಸ್ಥಗೊಂಡಿದ್ದ ಮಂಗಕ್ಕೆ ಚಿಕಿತ್ಸೆ ನೀಡಿ, ಬದುಕುಳಿಯುವಂತೆ ಮಾಡಿದರು. ಮೃತಪಟ್ಟ ಎರಡು ಮಂಗಗಳನ್ನು ಅಂಚೆ ಇಲಾಖೆ ಆವರಣದಲ್ಲಿ ಸಂಸ್ಕಾರ ಮಾಡಲಾಯಿತು.