ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಮಂಡ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ 10 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚೆಸ್ಕಾಂ ಅಧ್ಯಕ್ಷ ಹಾಗೂ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಗುದ್ದಲಿ ಪೂಜೆ ನೆರವೇರಿಸಿದರು.
ನೀರಾವರಿ ಇಲಾಖೆಯ ವತಿಯಿಂದ ಕಿರಗಂದೂರು ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ, ಚೀರನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಗೋದಾಮು ನಿರ್ಮಾಣದ ಶಂಕುಸ್ಥಾಪನೆ ಹಾಗೂ ಜಲಜೀವನ್ ಮಿಷನ್ ಅಡಿಯಲ್ಲಿ ಕುಡಿಯುವ ನೀರಿನ ಕಾಮಗಾರಿ ಸೇರಿದಂತೆ ಇತರೆ ಕಾಮಗಾರಿಗಳಿಗೆ ಚಾಲನೆ ಮಾಡಿ ಮಾತನಾಡಿದರು.
ಶ್ರೀರಂಗಪಟ್ಟಣ ಕ್ಷೇತ್ರವನ್ನು ಕುಡಿಯುವ ನೀರಿನ ಸಮಸ್ಯೆಯಿಂದ ಮುಕ್ತ ಮಾಡಲು ಕಾರ್ಯಕ್ರಮ ರೂಪಿಸಲಾಗುವುದು. ಕ್ಷೇತ್ರದ ಸಾಮಾನ್ಯ ಜನರ ಕಷ್ಟ ಸುಖ ಕೇಳುವುದರ ಜೊತೆಗೆ ಊರಿನ ಅಭಿವೃದ್ಧಿಗೆ ಸಂಕಲ್ಪ ಮಾಡಿ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಕೆಲಸ ಮಾಡಲು ದೃಢವಾದ ಹೆಜ್ಜೆ ಹಾಕಿದ್ದೇನೆ ಎಂದು ತಿಳಿಸಿದರು.
ಕಾಂಗ್ರೇಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಗೊಳಿಸುವ ಜೊತೆಗೆ ಸರ್ಕಾರ ಭಾಗ್ಯಜ್ಯೋತಿ ಯೋಜನೆಯ ಹಣ ಕಟ್ಟುವವರಿಗೆ ದುಡ್ಡು ಪಾವತಿಸಿ ಪೂರ್ಣ ಪ್ರಮಾಣದಲ್ಲಿ ಮನ್ನಾ ಮಾಡಲಾಗಿದೆ ಎಂದು ಹೇಳಿದರು.
ರೈತರಿಗೆ ಹತ್ತು ದಿನವಾದರೂ ಒಂದು ಕಟ್ಟು ನೀರು ಕೊಡಿಸಲೇಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಸೂನಗಹಳ್ಳಿ ವರದರಾಜಸ್ವಾಮಿ ದೇವಾಲಯಕ್ಕೆ 10 ಲಕ್ಷ ಅನುದಾನ ಕೊಡಲಾಗುವುದು.ಈ ಬಾರಿಯಾದರೂ ಕೂಡಲೇ ಮಳೆ ಬಿದ್ದು ರೈತರ ಜೀವನ ಸುಖಕರ ವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಇಂಡುವಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಪ್ರಸನ್ನ,ಸದಸ್ಯರಾದ ಮಂಜುಳಾ,ಸೌಮ್ಯ, ಮುಖಂಡರಾದ ತಿಮ್ಮೇಗೌಡ, ಮಂಜುನಾಥ್,ಮಿತ್ರ ರಮೇಶ್, ಕೆ.ಎಚ್.ನಾಗರಾಜು, ಹೆಮ್ಮಿಗೆ ಸಿದ್ದಪ್ಪ, ಅಂಕರಾಜು, ತಗ್ಗಹಳ್ಳಿ ಕೃಷ್ಣ, ಕಿಟ್ಟಿ, ಶಿವರಾಂ, ಜಯರಾಮ್, ಸುರೇಶ್, ಶಶಿಕುಮಾರ್, ಚಂದ್ರಶೇಖರ್ ಸೇರಿದಂತೆ ಇತರರು ಭಾಗವಹಿಸಿದ್ದರು.