ಕೆಪಿಸಿಸಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದ್ದು, 2018ರ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ವಜಾಗೊಳಿಸಿದೆ.
ಈ ಪ್ರಕರಣಕ್ಲೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಅದೇಶವನ್ನೂ ಕೂಡ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ದಾಖಲಿಸಿದ್ದ 120 B ಪ್ರಕರಣವನ್ನು ಸರ್ವೋಚ್ಛ ನ್ಯಾಯಾಲಯ ರದ್ದುಗೊಳಿಸಿದೆ.
ಈ ಪ್ರಕರಣದಲ್ಲಿ ಡಿಕೆಶಿ ಪಿತೂರಿ ಆರೋಪ ಹೊರಿಸಿದ್ದ ಇಡಿ, ಪಿಎಂಎಲ್ ಕಾಯಿದೆಯ ಅಡಿ ಪ್ರಕರಣ ದಾಖಲಿಸಿತ್ತು. ಈ ಅಪರಾಧಗಳು ಆದಾಯ ತೆರಿಗೆ ಕಾಯಿದೆಯ ವೇಳಾಪಟ್ಟಿಯ ಭಾಗವಾಗಿರದ ಕಾರಣ ಹೈಕೋರ್ಟಿನ ತೀರ್ಪನ್ನು ರದ್ದುಗೊಳಿಸಲಾಗಿದೆ. PML ಕಾಯಿದೆಯ ಅಡಿಯಲ್ಲಿ ಎಲ್ಲಾ ಪ್ರಕ್ರಿಯೆಗಳನ್ನು ರದ್ದುಗೊಳಿಸಲಾಗಿದೆ.
ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ 2018ರಲ್ಲಿ ಡಿಕೆ ಶಿವಕುಮಾರ್ ವಿರುದ್ಧ ದಾಖಲಾಗಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ರದ್ದುಗೊಳಿಸಿದೆ. 2017ರ ಆಗಸ್ಟ್ನಲ್ಲಿ ದಿಲ್ಲಿಯಲ್ಲಿರುವ ಅವರ ಫ್ಲಾಟ್ಗಳಲ್ಲಿ ಹಣ ಸಿಕ್ಕಿತ್ತು. ಈ ಹಿನ್ನೆಲೆ ಜಾರಿ ನಿರ್ದೇಶನಾಲಯ ಡಿಕೆ ಶಿವಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 120 B ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿತ್ತು. ಈ ಪ್ರಕರಣದಲ್ಲಿ 2019ರಲ್ಲಿ ಶಿವಕುಮಾರ್ ಸುಮಾರು ಮೂರು ತಿಂಗಳ ಕಾಲ ಜೈಲುಪಾಲಾಗಿದ್ದರು. ದೆಹಲಿ ಹೈಕೋರ್ಟ್ ಬಳಿಕ ಅವರಿಗೆ ಜಾಮೀನು ನೀಡಿತ್ತು. ಶಿವಕುಮಾರ್ ಅವರು ತನ್ನ ಬಂಧನವನ್ನು ಬಿಜೆಪಿ ರಾಜಕೀಯ ಸೇಡಿನ ಭಾಗ ಎಂದು ಆರೋಪಿಸಿದ್ದರು ಮತ್ತು ನ್ಯಾಯಾಂಗದ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ ಎಂದು ಹೇಳಿದ್ದರು.
ಈ ಮೊದಲು ಇಡಿ ಸಮನ್ಸ್ನ್ನು ರದ್ದುಪಡಿಸಲು ಡಿಕೆಶಿ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಇಡಿ ಸಮನ್ಸ್ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿತ್ತು. ಹೈಕೋರ್ಟ್ನ ನಿರ್ಧಾರ ಪ್ರಶ್ನಿಸಿ ಡಿಕೆ ಶಿವಕುಮಾರ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಈಗ ಪ್ರಕರಣವನ್ನು ರದ್ದುಗೊಳಿಸಲು ಆದೇಶಿಸಿದೆ. ಆದರೆ ಜಾರಿ ನಿರ್ದೇಶನಾಲಯ ಸುಪ್ರೀಂಕೋರ್ಟ್ನಲ್ಲಿ ಆದೇಶವನ್ನು ಮರುಪರಿಶೀಲಿಸಲು ಮನವಿ ಮಾಡಿದೆ.