ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಕೆ.ಆರ್.ಪೇಟೆ ಹಾಗೂ ಪಾಂಡವಪುರ ತಾಲೂಕಿನ ಹಲವು ಗ್ರಾಮ ಪಂಚಾಯತಿಗಳಲ್ಲಿ ಮತಪ್ರಚಾರ ನಡೆಸಿದರು.
ಪ್ರಚಾರಕ್ಕೆ ತೆರಳಿದ ಕಡೆಯಲೆಲ್ಲಾ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಸ್ಟಾರ್ ಚಂದ್ರು ಅವರನ್ನು ಆರತಿ ಎತ್ತಿ, ಪಟಾಕಿ ಸಿಡಿಸಿ, ಹೂ ಮಾಲೆ ಹಾಕಿ ಸ್ವಾಗತಿಸಿದ ದೃಶ್ಯಗಳು ಎಲ್ಲೆಡೆ ಕಂಡುಬಂದಿತ್ತು. ಪಾಂಡವಪುರದಲ್ಲಿ ರೈತ ಸಂಘ ಹಾಗೂ ಸರ್ವೋದಯ ಪಕ್ಷದ ಕಾರ್ಯಕರ್ತರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು.
ಕಾಂಗ್ರೆಸ್ ಪಕ್ಷ ರೈತರ ಪಕ್ಷ. ಉಳುವವನೇ ಭೂಮಿ ಒಡೆಯ ಕಾಯ್ದೆ ಜಾರಿಗೆ ತಂದಿದ್ದು ಕಾಂಗ್ರೆಸ್. ರೈತ ಬಾಂಧವರು ಮತ ಚಲಾಯಿಸುವ ಮುನ್ನ ಕಾಂಗ್ರೆಸ್ ಸರ್ಕಾರ ನೀಡಿದ ಕೊಡುಗೆಗಳನ್ನು ಒಮ್ಮೆ ಮನನ ಮಾಡಬೇಕು ಎಂದರು.
ಸಾಲ ಮನ್ನಾ
ನನ್ನ ಗೆಲುವು ರೈತರ ಗೆಲುವು. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಆಧಾರದ ಮೇಲೆ ಮತ ಕೇಳುತ್ತಿದ್ದೇನೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಸಾಲಮನ್ನಾ, ಕನಿಷ್ಠ ಬೆಂಬಲ ಬೆಲೆ ಜಾರಿಗೊಳಿಸಲಾಗುವುದು. ನಿಮ್ಮ ಒಂದು ವೋಟ್ ರೈತರ ಜೀವನ ಸುಧಾರಣೆಗೆ ದಾರಿದೀಪವಾಗಲಿದೆ ಎಂದರು.
ಸ್ವಾಭಿಮಾನಕ್ಕೆ ಹೆಸರಾದ ಜಿಲ್ಲೆ ಎಂದರೆ ಅದು ಮಂಡ್ಯ. ಜಿಲ್ಲೆಯ ಸ್ವಾಭಿಮಾನದ ಅಳಿವು, ಉಳಿವು ಮಂಡ್ಯ ಜಿಲ್ಲೆಯ ಜನತೆ ಕೈಯಲಿದೆ. ಜನ್ಮ ಕೊಟ್ಟ ಈ ಮಣ್ಣಿನ ಋಣ ತೀರಿಸಲು ಬಂದಿದ್ದೇನೆ. ಮಂಡ್ಯ ಜನರ ಪ್ರೀತಿ, ಸ್ವಾಭಿಮಾನ ನಂಬಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಜಿಲ್ಲೆಯ ಜನರು ನನ್ನ ಕೈ ಹಿಡಿಯುವ ಮೂಲಕ ಕಾಂಗ್ರೆಸ್ ಗೆ ಶಕ್ತಿ ತುಂಬಬೇಕು, ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ದರ್ಶನ್ ಪುಟ್ಟಣ್ಣಯ್ಯ ಸಾಥ್
ಪಾಂಡವಪುರ ತಾಲೂಕಿನಲ್ಲಿ ಸ್ಟಾರ್ ಚಂದ್ರು ಪರ ದರ್ಶನ್ ಪುಟ್ಟಣ್ಣಯ್ಯ ಮತಯಾಚಿಸಿದರು. ವಿಶ್ವದಲ್ಲೇ ಎಲ್ಲೂ ಇಲ್ಲದ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಅನುಷ್ಠಾನಕ್ಕೆ ತಂದಿದೆ. ರೈತರ ಬಗ್ಗೆ ಕಾಳಜಿ ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ರೈತ ಬಂಧುಗಳು ಬೆಂಬಲಿಸಿ ಸ್ಟಾರ್ ಚಂದ್ರು ಅವರನ್ನು ಜಯಶೀಲರನ್ನಾಗಿಸಬೇಕು ಎಂದು ವಿನಂತಿಸಿಕೊಂಡರು.
ನಾರಾಯಣಪುರ, ಚಿನಕುರಳಿ, ಹೊನಗನಹಳ್ಳಿ, ರಾಗಿಮುದ್ದನಹಳ್ಳಿ, ಡಿಂಕ, ಬನ್ನಂಗಾಡಿ, ಕಟ್ಟೇರಿ, ಅರಳಕುಪ್ಪೆ, ಕೆ.ಬೆಟ್ಟಹಳ್ಳಿ, ಹರವು, ಕ್ಯಾತನಹಳ್ಳಿ, ಕೆನ್ಯಾಳುಪ್ರಚಾರ ಪಂಚಾಯತಿಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು.