ಪಿ.ಆರ್.ಒ, ಎಪಿ.ಆರ್. ಒ ಹಾಗೂ ಪೊಲಿಂಗ್ ಅಧಿಕಾರಿಗಳಿಗೆ ಎರಡನೇ ಹಂತದ ತರಬೇತಿಯನ್ನು ನೀಡಲಾಗುತ್ತಿದೆ. ಯಾವುದೇ ಗೊಂದಲ ಇದ್ದರೂ ಪರಿಹರಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಮಂಡ್ಯ ವಿಶ್ವವಿದ್ಯಾಲಯದಲ್ಲಿ ನಡೆದ ಚುನಾವಣಾ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮತಗಟ್ಟೆವಾರು ಕಾರ್ಯನಿರ್ವಹಿಸುತ್ತಿರುವ ಪಿ.ಆರ್.ಒ, ಎಪಿಆರ್ ಒ ಹಾಗೂ ಮತಗಟ್ಟೆ ಅಧಿಕಾರಿಗಳನ್ನು ಗುಂಪು ಮಾಡಿ ತರಬೇತಿಯನ್ನು ನೀಡಲಾಗುತ್ತಿದೆ. ಏಪ್ರಿಲ್ 25 ಹಾಗೂ 26 ರಂದು ಮುಖ್ಯವಾಗಿ ಕಾರ್ಯನಿರ್ವಹಿಸಬೇಕಿರುವ ಅಂಶಗಳನ್ನು ಪಟ್ಟಿ ಮಾಡಿಕೊಂಡು ಮನನ ಮಾಡಿಕೊಳ್ಳಿ ಎಂದರು.
ಮತದಾನದ ದಿನದಂದು ಯಾವುದಾದರೂ ಸಣ್ಣ ತಪ್ಪು ವಾಟಿಂಗ್ ಮುಕ್ತಾಯವಾದ ನಂತರ ಕ್ಲೋಸ್ ಬಟನ್ ಒಂದನ್ನು ಒತ್ತುವುದನ್ನು ಮರೆತರೆ ಏಣಿಕೆ ಸಂದರ್ಭದಲ್ಲಿ ಬಹಳಷ್ಟು ಕೆಲಸ ನಿರ್ವಹಿಸಬೇಕಾಗುತ್ತದೆ. ಸಣ್ಣ ತಪ್ಪುಗಳು ದೊಡ್ಡ ಕೆಲಸಗಳನ್ನು ತರುತ್ತದೆ ಎಂದರು.
ಎಲ್ಲಾ ಪಿ.ಆರ್.ಒ ಗಳಿಗೆ ಹ್ಯಾಂಡ್ ಬುಕ್ ನೀಡಲಾಗಿದೆ, ಅದರಂತೆ ಕಾರ್ಯನಿರ್ವಹಿಸಿ. ಚುನಾವಣಾ ಕರ್ತವ್ಯ ಪತ್ರದ ಹಿಂಬದಿ ಬಸ್ ವ್ಯವಸ್ಥೆ ಹಾಗೂ ಸಮಯವನ್ನು ನಮೂದಿಸಿದೆ. ನಿಗದಿಪಡಿಸಿರುವ ಸಮಯಕ್ಕೆ ವರದಿ ಮಾಡಿಕೊಳ್ಳಿ ಎಂದರು.
ಚುನಾವಣಾ ತರಬೇತಿ ಏರ್ಪಡಿಸಿರುವ ಎಲ್ಲಾ ತಾಲ್ಲೂಕುಗಳಲ್ಲಿ ಆಯುಷ್ ಇಲಾಖೆ ವತಿಯಿಂದ ಚಿಂಚಾ, ಸೊಗಡೆ ಬೇರು ಪಾನಕವನ್ನು ವಿತರಿಸಲಾಯಿತು.
ಜಿಲ್ಲಾಧಿಕಾರಿಗಳು ಮದ್ದೂರು, ನಾಗಮಂಗಲ, ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಆಯೋಜಿಸಲಾಗಿದ್ದ ತರಬೇತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಾಗಮಂಗಲದ ತರಬೇತಿ ಸ್ಥಳದಲ್ಲಿ ನೀಡಲಾಗುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡರು. ನಾಗಮಂಗಲದ ಕುಡುಗಬಾಳು ಹಾಗೂ ದೇವಲಾಪುರ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಉಪಸ್ಥಿತರಿದ್ದರು