ನಾಡಿಗೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ನೀಡಿರುವ ಕೊಡುಗೆ ಅಪಾರವಾಗಿದೆ, ಅವರು ತೊಡಗಿಸಿಕೊಳ್ಳದ ಕ್ಷೇತ್ರಗಳೇ ಇಲ್ಲವೆಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಅಧ್ಯಕ್ಷ ತಗಹಳ್ಳಿ ವೆಂಕಟೇಶ್ ಹೇಳಿದರು.
ಮಂಡ್ಯ ನಗರದ ಪ್ರವಾಸಿಮಂದಿರ ಸಮೀಪದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 140ನೇ ವರ್ಷದ ಜನ್ಮದಿನಾಚರಣೆ ಮತ್ತು ಮಜ್ಜಿಗೆ-ಪಾನಕ ವಿರತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾಡಿನ ಜನತೆ ಪ್ರತಿದಿನದ ಬೆಳಿಗೆದ್ದು ನೆನಸಿಕೊಳ್ಳಲೇ ಬೇಕಾದ ಪ್ರಾತ:ಸ್ಮರಣೀಯರಲ್ಲಿ ಮಹನೀಯರು ನಾಲ್ವಡಿ ಅವರಾಗಿದ್ದಾರೆ, ಆಧುನಿಕ ಮೈಸೂರು ರಾಜ್ಯ ನಿರ್ಮಾಣಕ್ಕೆ, ಕರುನಾಡ ಅಭಿವೃದ್ಧಿಗೆ ಒಡೆಯರ್ ಕೊಡುಗೆ ಅಪಾರ. ಇಂದು ಅವರ ಜನ್ಮದಿನದ ನಿಮಿತ್ತ ‘ರಾಜರ್ಷಿ’ಯ ಬದುಕು, ಸಾಧನೆಯನ್ನು ಸ್ಮರಿಸಿಕೋಳ್ಳೋಣ ಎಂದು ನುಡಿದರು.
ಕೃಷಿ, ಕೈಗಾರಿಕೆ, ನೀರಾವರಿ, ಜಲ ವಿದ್ಯುತ್, ಶಿಕ್ಷಣ, ಆರೋಗ್ಯ ಸಾಹಿತ್ಯ, ರಾಜಕೀಯ ಸೇರಿದಂತೆ ಹಲವು ವಲಯಗಳಲ್ಲಿ ಅಂದಿನ ಮೈಸೂರು ರಾಜ್ಯ ಮುಂಚೂಣಿಯಲ್ಲಿತ್ತು. ಅಭಿವೃದ್ದಿಯ ಹಿಂದೆ ಇವರ ಕೊಡುಗೆ ಅಪಾರವಾಗಿತ್ತು. ಅಂದು ಬೆಂಗಳೂರು, ಮೈಸೂರು ನಗರಗಳು ಎಲ್ಲರ ಆಕರ್ಷಣೆಯ ಕೇಂದ್ರವಾಗುವಂತೆ ಮಾಡಿದ್ದು ಅವಿಸ್ಮರಣೀಯ ಎಂದರು.
ಮಂಡ್ಯ ಜಿಲ್ಲೆಯ ಅಭಿವೃದ್ದಿಗೆ ಇವರು ನೀಡಿದ ಅಪಾರ ಶ್ರಮ ಮತ್ತು ತ್ಯಾಗವನ್ನು ಮರೆಯಲಾಗದು, ಕೆ.ಆರ್.ಎಸ್.ಕಟ್ಟಿ ರೈತರನ್ನು ಅನ್ನದಾತರನ್ನಾಗಿಸಿದ ಕೀರ್ತಿವಂತರು ನಾಲ್ವಡಿ, ಇಂತಹ ಸಾಧಕ ಮಹಾರಾಜರನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ನೆಲದನಿ ಬಳಗದ ಅಧ್ಯಕ್ಷ ಮಂಗಲ ಎಂ.ಸಿ.ಲಂಕೇಶ್, ಗಾಂಧೀಜಿ ಕಂಡ ಕನಸನನು ನನಸು ಮಾಡಿದ ಮಹಾನ್ ಪುರುಷ ನಾಲ್ವಡಿ ಕೃಷ್ಣರಾಜ ಒಡೆಯರು ಸರ್ವಜನಾಂಗವನ್ನು ಒಂದೇ ಸೂರಿನಲ್ಲಿ ಬದುಕುವಂತೆ ಮಾಡಿ ಸರ್ವರಿಗೂ ಸಮಾನತೆ ಸಾರಿ, ದಲಿತರಿಗೆ ಮೀಸಲಾತಿ ಕಲ್ಪಿಸುವುದು ಸೇರಿದಂತೆ ಎಲ್ಲರಿಗೂ ಎಲ್ಲಾ ವರ್ಗದ ಜನರಿಗೂ ವಿದ್ಯಾಭ್ಯಾಸ ಹಾಗೂ ಉದ್ಯೋಗವನ್ನು ಕಲ್ಪಿಸಿಕೊಟ್ಟರು ಎಂದು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಕಸಾಪ ಮಂಡ್ಯ ನಗರಾಧ್ಯಕ್ಷೆ ಸುಜಾತಾಕೃಷ್ಣ, ಪ್ರಗತಿಪರ ಹೋರಾಟಗಾರರಾದ ನಾಗರತ್ನ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ತಗ್ಗಹಳ್ಳಿ ನಾಗರಾಜು, ಮಂಗಲ ಮಹಾದೇವ, ರತ್ನಜೈನ್, ಸಚ್ಚಿನ್, ಬುಜಹಳ್ಳಿ ರಾಮಚಂದ್ರ, ಲಿಂಗಪ್ಪ, ಸಿದ್ದೇಗೌಡ, ಜಗದೀಶ್, ನವೀನ್ ಮತ್ತಿತರರಿದ್ದರು.