ಮಂಡ್ಯ ಕರ್ನಾಟಕ ಸಂಘದ ಆಶ್ರಯದಲ್ಲಿ ಪಾರ್ವತಮ್ಮ ಪಿ.ಎನ್.ಜವರಪ್ಪಗೌಡ ಪತ್ರಿಕಾ ಪ್ರಶಸ್ತಿಗಳ ಪ್ರದಾನ ಸಮಾರಂಭವನ್ನು ಜೂನ್ 20ರಂದು ಸಂಜೆ 5ಗಂಟೆಗೆ ಮಂಡ್ಯನಗರದ ಕೆವಿ ಶಂಕರಗೌಡ ಶತಮಾನೋತ್ಸವ ಭಾವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಂಘದ ಉಪಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ರಾಜು ಮಳವಳ್ಳಿ ಹಾಗೂ ಪ್ರಜಾವಾಣಿಯ ವರದಿಗಾರ ಗಣಂಗೂರು ನಂಜೇಗೌಡ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.
ಅಂದಿನ ಕಾರ್ಯಕ್ರಮ ಅಧ್ಯಕ್ಷತೆಯನ್ನು ಮಾಜಿ ಸಚಿವ ಎಂ ಎಸ್ ಆತ್ಮಾನಂದ ವಹಿಸುವರು. ಕುವೆಂಪು ಅವರ ಸುಪುತ್ರಿ ಸಾಹಿತಿ ಧಾರಣಿ ಕೆ ಚಿದಾನಂದ ಗೌಡ ಹಾಗೂ ಮೈಸೂರಿನ ವಿಶ್ರಾಂತ ಕುಲಪತಿ ಡಾ.ಕೆ ಚಿದಾನಂದ ಗೌಡ ಅವರು ಪ್ರಶಸ್ತಿ ಪ್ರದಾನ ಮಾಡುವರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಂ.ಶ್ರೀನಿವಾಸ್ ಅವರು ಭಾಗವಹಿಸಲಿದ್ದು,ಸಹ ಪ್ರಾಧ್ಯಾಪಕ ಡಾ.ಶಾಂತರಾಜು ಅಭಿನಂದನಾ ನುಡಿಯನ್ನಾಡಲಿದ್ದು ಈ ಸಂದರ್ಭದಲ್ಲಿ ದತ್ತಿ ದಾನಿಗಳಾದ ಪಿ.ಜೆ.ಚೈತನ್ಯ ಕುಮಾರ್ ಉಪಸ್ಥಿತರಿರುವರು ಎಂದರು.
ಕರ್ನಾಟಕ ಸಂಘದ ಕಾರ್ಯದರ್ಶಿ ಲೋಕೇಶ್ ಮಾತನಾಡಿ, ಇದೇ ಜೂನ್ 22ರಂದು ಮಂಡ್ಯ ಜಿಲ್ಲೆಯ ಹಿರಿಯ ರಾಜಕಾರಣಿ ಮಳವಳ್ಳಿಯ ಹೆಚ್.ವಿ .ವೀರೇಗೌಡರ ಜೀವನದ ‘ಹಳ್ಳಿಗಾಡಿನ ರೂವಾರಿ’ ಕೃತಿ ಬಿಡುಗಡೆ ಸಮಾರಂಭವನ್ನು ಕೆ ವಿ ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಕೊಮ್ಮೇರಹಳ್ಳಿಯ ವಿಶ್ವಮಾನವ ಕ್ಷೇತ್ರದ ಶ್ರೀಪುರುಷೋತ್ತಮಾನಂದನಾಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ, ನಿವೃತ್ತ ಪ್ರಾಧ್ಯಾಪಕ ಪ್ರೊ.ಟಿ ಶಿವಣ್ಣ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಕೃತಿಯನ್ನು ಬಿಡುಗಡೆ ಮಾಡುವರು ಎಂದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಂ ಶ್ರೀನಿವಾಸ್ ಭಾಗವಹಿಸಲಿದ್ದು, ಈ ಸಂದರ್ಭದಲ್ಲಿ ಕೃತಿಯ ಕರ್ತೃ ಡಾ.ಎನ್ ಎಸ್ ದೇವಿಕಾ, ಹೆಚ್.ವಿ.ವೀರೇಗೌಡರ ಹಿರಿಯ ಪುತ್ರ ಹೆಚ್ ವಿ ಜಯರಾಮ್ ಉಪಸ್ಥಿತರಿರುವರು ಎಂದರು.
ಗೋಷ್ಠಿಯಲ್ಲಿ ಮಂಜುಳ ಉದಯ ಶಂಕರ್, ನಾಗರತ್ನ ಉಪಸ್ಥಿತರಿದ್ದರು.