ಒಬ್ಬ ಜವಾಬ್ದಾರಿಯುತ ಶಾಸಕರಾಗಿ ರಾಜ್ಯ ಮತ್ತು ರಾಷ್ಟ್ರ ನಾಯಕರ ವಿರುದ್ಧ ಅಸಂವಿಧಾನಿಕ ಪದ ಬಳಕೆ ಮಾಡಿ ಅವರನ್ನು ಅವಹೇಳನ ಮಾಡಿರುವ ಶಾಸಕ ನರೇಂದ್ರಸ್ವಾಮಿ ಅವರು, ಅದರ ನೈತಿಕ ಹೊಣೆ ಹೊತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಒತ್ತಾಯಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಳವಳ್ಳಿ ತಾಲೂಕಿನಲ್ಲಿ ಬೆಳೆ ಬೆಳೆಯಲು ,ಜನ ಜಾನುವಾರುಗಳಿಗೆ ನೀರಿಲ್ಲದ ಸನ್ನಿವೇಶ ಸೃಷ್ಟಿಯಾಗಿದೆ. ಆದರೆ ಇದನ್ನು ಬದಿಗಿಟ್ಟು ಶಾಸಕರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರುಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಮಳವಳ್ಳಿಯ ಕೆರೆ ಕಟ್ಟೆಗಳಲ್ಲಿ ಒಂದು ಹನಿಯು ನೀರಿಲ್ಲ. ಇದನ್ನು ತುಂಬಿಸುವ ಬದಲು ರಾಷ್ಟ್ರ ಮತ್ತು ರಾಜ್ಯದ ನಾಯಕರ ವಿರುದ್ದ ಅಸಂವಿಧಾನಿಕ ಪದವನ್ನು ಶಾಸಕರು ಬಳಕೆ ಮಾಡುತ್ತಿದ್ದು ಹಾಗಾಗಿ ಇದರ ನೈತಿಕ ಹೊಣೆ ಹೊಟ್ಟು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು .
ಕುಮಾರಸ್ವಾಮಿ ಅವರನ್ನು ಮುಟ್ಟಾಳ, ಅಯೋಗ್ಯ ಎಂದು ನಿಂದನೆ ಮಾಡಿರುವ ಜತೆ ರಾಜ್ಯಪಾಲರ ಬಗ್ಗೆಯೂ ಕ್ಷುಲ್ಲಕವಾಗಿ ಮಾತನಾಡಿದ್ದಾರೆ. ಇವರು ಶಾಸಕ ಸ್ಥಾನದಿಂದ ಅನರ್ಹರಾಗಿದ್ದ ಸಂದರ್ಭದಲ್ಲಿ ಅವರನ್ನು ಯಾರು ಕಾಪಾಡಿದ್ದಾರೆ ಎನ್ನುವುದನ್ನು ಮರೆತು ಕುಮಾರಸ್ವಾಮಿ ಅವರನ್ನೇ ನಿಂದಿಸುತ್ತಿದ್ದಾರೆ. ಇವರು ಸುಸಂಸ್ಕೃತರಾ ಎಂದು ಜರಿದರು.
ಗೋಷ್ಠಿಯಲ್ಲಿ ಜಿಲ್ಲಾ ಎಸ್ಸ್ಸಿಎಸ್ಟಿ ಜೆಡಿಎಸ್ ಘಟಕದ ಅಧ್ಯಕ್ಷ ಸಾತನೂರು ಜಯರಾಮ್, ಯುವ ಜೆಡಿಎಸ್ ಅಧ್ಯಕ್ಷ ರವಿ ,ರಾಜ್ಯ ಹಿಂದುಳಿದ ವರ್ಗಗಳ ಜಾದಳ ವಿಭಾಗದ ಅಧ್ಯಕ್ಷ ಡಿ ಜಯರಾಮ್ ,ಜೆಡಿಎಸ್ ಕಾರ್ಯಾಧ್ಯಕ್ಷ ಪುಟ್ಟಬುದ್ದಿ, ಬೆಳಕವಾಡಿ ಕಾಂತರಾಜು, ಸದಾನಂದ, ಸಿದ್ದಾಚಾರಿ ,ಪ್ರಕಾಶ್ ಉಪಸ್ಥಿತರಿದ್ದರು.