ಯೋಗ ಪ್ರಾಚೀನ ಕಲೆಯಾಗಿದ್ದು,ಮನುಷ್ಯನ ಕಾಯಿಲೆ ನಿವಾರಣೆ ಜೊತೆಗೆ ಇಂದ್ರಿಯಗಳು ಬಹಳ ಚೆನ್ನಾಗಿ ಕೆಲಸ ಮಾಡಬೇಕಾದರೆ ನಿರಂತವಾಗಿ ಯೋಗಾಭ್ಯಾಸ ಮಾಡಬೇಕೆಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ಕರೆ ನೀಡಿದರು.
ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಾಲೆ ಮತ್ತು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪ್ರತಿದಿನ ಅರ್ಧಗಂಟೆಗಳ ಯೋಗಾಭ್ಯಾಸ ಮಾಡಿಸಿದರೆ ಅವರಲ್ಲಿ ಏಕಾಗ್ರತೆ, ಶ್ರದ್ಧೆ, ನೆನಪಿನ ಶಕ್ತಿ ಹೆಚ್ಚಾಗುತ್ತದೆ.
ಇತ್ತೀಚಿನ ದಿನದಲ್ಲಿ ಯುವಕರು ದೈಹಿಕ ಸದೃಢತೆಗಾಗಿ ಅನೇಕ ಉಪಕರಣಗಳನ್ನು ಬಳಸುತ್ತಾರೆ. ಆದರೆ ಯೋಗಾಭ್ಯಾಸದಿಂದ ದೈಹಿಕ ಸದೃಢತೆ ಜೊತೆಗೆ ಮಾನಸಿಕವಾಗಿಯೂ ಸಹ ಶಾಂತಿಯಿಂದ ಇರಬಹುದಾಗಿದೆ ಎಂದರು.
ಮದ್ದೂರಿನ ಶಿವಪುರ ಸತ್ಯಾಗ್ರಹ ಸೌಧ ಆವರಣ, ಕೆ.ಆರ್.ಪೇಟೆಯ ಲಕ್ಷ್ಮಿಜನಾರ್ಧನ ಸ್ವಾಮಿ ದೇವಸ್ಥಾನ ಹಾಗೂ ಪ್ರಸಿದ್ಧ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಮುಂಭಾಗ ಸೇರಿದಂತೆ ಒಟ್ಟು ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಯೋಗ ದಿನಾಚರಣೆಯನ್ನು ಬಹಳ ಯಶಸ್ವಿಯಾಗಿ ಆಚರಿಸಲಾಯಿತು ಎಂದರು.
ಪ್ರಸ್ತುತ ದಿನದಲ್ಲಿ ವಿದೇಶದಲ್ಲೂ ಸಹ ಯೋಗದ ಪ್ರಯೋಜನ ತಿಳಿದು ಯೋಗ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಹೊರ ರಾಜ್ಯ,ದೇಶದವರು ನಮ್ಮ ದೇಶದ ಕಲೆಯನ್ನು ಕಲಿಯುತ್ತಿರುವುದು ಸಂತಸದ ವಿಷಯ ಎಂದರು.
ಜಿ.ಪಂ.ಸಿಇಓ ದಿವ್ಯಾಪ್ರಭು ಮಾತನಾಡಿ,ಯೋಗ ಎಂಬುದು ಸಂಸ್ಕೃತದ ಯುಗ್ ಎಂಬ ಪದದಿಂದ ಬಂದಿದೆ. ಯೋಗ ಎಂದರೆ ಒಗ್ಗೂಡಿಸುವುದು ಎಂದರ್ಥ. ನಮ್ಮ ಶರೀರ,ಮನಸ್ಸು,ಆತ್ಮವನ್ನು ಒಗ್ಗಟ್ಟಾಗಿ ಇಟ್ಟುಕೊಳ್ಳಲು ಹಾಗೂ ಮನಸ್ಸನ್ನು ನಿಯಂತ್ರಣದಲ್ಲಿಡಲು ಯೋಗ ಮತ್ತು ಧ್ಯಾನದಿಂದ ಮಾತ್ರ ಸಾಧ್ಯ ಎಂದರು.
ಮನುಷ್ಯರಿಗೆ ದೇಹ ಒಂದು ಕಡೆ ಮನಸ್ಸು ಮತ್ತೊಂದು ಕಡೆ ಇರುತ್ತದೆ.ಇದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತದೆ.ಯೋಗ ಮತ್ತು ಧ್ಯಾನವನ್ನು ದಿನನಿತ್ಯ ಮಾಡೋಣ ಇದೊಂದು ಅಭ್ಯಾಸವಾಗಿ ಮಾಡಿಕೊಂಡು ನಮ್ಮ ಜೀವನವನ್ನು ಹಾಗೂ ಸಮಾಜವನ್ನು ಸದೃಢವಾಗಿ ಮಾಡೋಣ ಎಂದು ಹೇಳಿದರು.