ಜಾತಿ ನಿಂದನೆ,ಮಹಿಳೆಯರ ಬಗ್ಗೆ ಅಸಹ್ಯ ಪದ ಬಳಕೆ ಆರೋಪ ಮಾಡಿರುವ ರಾಜ ರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಜಿಲ್ಲಾ ಕಾಂಗ್ರೆಸ್ ವಕ್ತಾರ ಸಿ.ಎಂ.ದ್ಯಾವಪ್ಪ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿಯಲ್ಲಿ ದೂರು ಸಲ್ಲಿಸಿದರು.
ಕಸ ವಿಲೇವಾರಿ ಗುತ್ತಿಗೆದಾರ ಚಲುವರಾಜು ಎಂಬುವರಿಗೆ ಶಾಸಕ ಮುನಿರತ್ನ ಅವಾಚ್ಯವಾಗಿ ನಿಂದಿಸಿರುವರೆನ್ನಲಾಗಿರುವ ಆಡಿಯೋ ಬಯಲಾದ ಬೆನ್ನಲ್ಲೇ, ಮುನಿರತ್ನ ವಿರುದ್ಧ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿದ್ದವು. ಆಡಿಯೋದಲ್ಲಿ ದಲಿತರ ಮತ್ತು ಒಕ್ಕಲಿಗ ಮಹಿಳೆಯರ ವಿರುದ್ಧ ಕೀಳುಮಟ್ಟದ ಭಾಷೆ ಬಳಸಿ ಶಾಸಕರು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿತ್ತು.ಆರ್ ಆರ್ ನಗರ ಶಾಸಕ ಮುನಿರತ್ನ ಮೇಲೆ ಎಫ್ಐಆರ್ ಮಾಡಿ ಕಠಿಣ ಶಿಕ್ಷೆ ಮತ್ತು ಜಾಮೀನು ನೀಡದಿರಲು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಹಿರಿಯ ಉಪಾಧ್ಯಕ್ಷ ಎಂ.ಎಲ್. ಸುರೇಶ್,ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ನಗರಸಭಾ ಸದಸ್ಯ ಎಂ.ಮಹೇಶ್, ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ್,ಹಿಂದುಳಿದ ವರ್ಗ ಕಾರ್ಯದರ್ಶಿ ಕೆ.ಸುರೇಶ್, ಮಂಗಲ ಯೋಗೇಶ್ ಇದ್ದರು.