Friday, September 20, 2024

ಪ್ರಾಯೋಗಿಕ ಆವೃತ್ತಿ

ಸಸ್ಯ ಸಂಕುಲ ಪ್ರಕೃತಿಯ ನಿಜವಾದ ಸಂಪತ್ತು: ನಂಜರಾಜು

ಸಸ್ಯ ಸಂಪತ್ತನ್ನು ರಕ್ಷಿಸಿಕೊಳ್ಳಬೇಕಾದುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ವಿಷಯ ತಜ್ಞ ಎಲ್.ಎಸ್. ನಂಜರಾಜು ತಿಳಿಸಿದರು.

ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಚಿಕ್ಕಮಂಡ್ಯ ಸರ್ಕಾರಿ ಪ್ರೌಢಶಾಲೆ ಇವರ ವತಿಯಿಂದ ಶಾಲಾ ಆವರಣದಲ್ಲಿ ನಡೆದ ವಿಶ್ವ ಓಜೋನ್ ದಿನದ ನಿಮಿತ್ತ ವಿದ್ಯಾರ್ಥಿಗಳ ಮೂಲಕ ಸಸ್ಯ ಸಾಕ್ಷರತಾ ಆಂದೋಲನಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಸಸ್ಯ ಸಂಕುಲ ಪ್ರಕೃತಿಯ ನಿಜವಾದ ಸಂಪತ್ತಾಗಿದ್ದು, ಇದರ ಉಳಿವು ಮತ್ತು ಬೆಳವಣಿಗೆ ಮುಖೇನ ಮನುಕುಲದ ಉಳಿವು ಮತ್ತು ಬೆಳವಣಿಗೆಯನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.

ಭೂಮಿಯನ್ನು ಕಾಪಾಡಲು ಜಲ ಮತ್ತು ಸಸ್ಯ ಸಂಪತ್ತನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದರ ಬಗ್ಗೆ ಪ್ರೌಢಶಿಕ್ಷಣದಲ್ಲಿ ಅಳವಡಿಸಿಕೊಳ್ಳುವುದು ತೀರಾ ಅಗತ್ಯತೆ ಎನಿಸಿದೆ ಎಂದರು.

ನೀರು ಮತ್ತು ಸಸ್ಯ ಮಾನವ ಕುಲಕ್ಕೆ ಒದಗಿ ಬಾರದಿದ್ದರೆ ಮನುಕುಲ ಅಸ್ತಿತ್ವವನ್ನೇ ಹೋಗುತಿತ್ತು. ಈ ಸಂಪತ್ತನ್ನು ಮುಂದಿನ ತಲೆಮಾರಿಗೆ ರಕ್ಷಿಸುವ ಹೊಣೆಗಾರಿಕೆ ಪ್ರತಿಯೊಬ್ಬ ವಿದ್ಯಾರ್ಥಿ ಮೇಲಿದೆ ಎಂದರು.
ಸಸ್ಯ ಎನ್ನುವುದು ಸರಳ ಸಾಕ್ಷರತೆ. ಪೂರ್ವಿಕರು ನೆಡುತೋಪು ಮತ್ತು ಗುಂಡು ತೋಪುಗಳಲ್ಲಿ ಸಸ್ಯ ಸಂರಕ್ಷಣೆ ಮಾಡಿ ಅತಿ ಹೆಚ್ಚು ಆಮ್ಲಜನಕವನ್ನು ಪಡೆದುಕೊಳ್ಳುತ್ತಿದ್ದರು. ಪ್ರಸ್ತುತ ದಿನಗಳಲ್ಲಿ ಆಮ್ಲಜನಕವನ್ನು ದುಡ್ಡುಕೊಟ್ಟು ಪಡೆಯುವಂತಹುದ್ದನ್ನು ಬೇರೆ ಬೇರೆ ರಾಷ್ಟ್ರಗಳಲ್ಲಿ ಕಾಣಬಹುದಾಗಿದೆ ಎಂದರು.

ಕಳೆದ ನಾಲ್ಕು ತಿಂಗಳ ಹಿಂದೆ ಒಂದು ಶತಮಾನದಷ್ಟು ಕಂಡರಿಯದಷ್ಟು ರಣ ಬಿಸಿಲನ್ನು ನಾವು ಅನುಭವಿಸಿದೆವು. ಪ್ರಸ್ತುತ ದಿನಗಳಲ್ಲಿ ಅತ್ಯಧಿತ ತಾಪಮಾನಕ್ಕೆ ನಾವು ನೀವೆಲ್ಲಾ ಸಾಕ್ಷಿಯಾಗಿದ್ದೇವೆ. ಇದರ ಕಾರಣವನ್ನು ಹುಡುಕಿದಾಗ ಭೂಮಿ ಯಾಕಿಷ್ಟು ಸುಡುತ್ತಿದೆ ಎಂದು ಆತಂಕವಾಗುತ್ತದೆ. ಪರಿಸರ ನಾಶದ ಮೂಲಕ ವಾತಾವರಣವನ್ನು ಅನೇಕ ಬಗೆಯಲ್ಲಿ ಕಲುಷಿತಗೊಳಿಸುತ್ತಿರುವ ನಾವುಗಳು ಭೂಮಿಯ ಸುತ್ತಲೂ ರಕ್ಷಾ ಕವಚದಂತಿರುವ ಓಜೋನ್ ಪದರವನ್ನು ಶಿಥಿಲಗೊಳಿಸುತ್ತಿದ್ದೇವೆ. ಇವುಗಳೆಲ್ಲದರ ಪರಿಣಾಮವೇ ತಾಪಮಾನದ ಏರಿಕೆಗೆ ಕಾರಣವಾಗಿದೆ ಎಂದು ಅಭಿಪ್ರಾಯಿಸಿದರು.

ಮನುಷ್ಯ ತನ್ನ ಉಳಿವಿಗಾಗಿ ಗಿಡ-ಮರಗಳನ್ನು ನೆಟ್ಟು ಉಳಿಸದಿದ್ದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ತಾಪಮಾನ ತಲುಪುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ ಎಂದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಭವ್ಯ ಅವರು ಸಸ್ಯ ವಿತರಿಸುವ ಮೂಲಕ ಕಾರ‌್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ. ಯೋಗೀಶ್ ವಿದ್ಯಾರ್ಥಿಗಳ ಮೂಲಕ ಸಸ್ಯಸಾಕ್ಷರತಾ ಕಾರ‌್ಯಕ್ರಮಗಳ ಮಾಹಿತಿ ನೀಡಿ ಪ್ರತಿ ವರ್ಷ ಸಸಿಗಳನ್ನು ನೆಟ್ಟು ಬೆಳೆಸಿದ ವಿದ್ಯಾರ್ಥಿಗಳಿಗೆ 6 ಸಾವಿರ ನಗದನ್ನು ನೀಡಿ ಪುರಸ್ಕರಿಸಿದರು.

ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಚ್.ಎಂ. ದೇವರಾಜು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಚಿತ್ರಕೂಟದ ಮುಖ್ಯಸ್ಥ ಅರವಿಂದ ಪ್ರಭು, ಪರಿಚಯ ಪ್ರಕಾಶನದ ಮುಖ್ಯಸ್ಥ ಶಿವಕುಮಾರ್ ಆರಾಧ್ಯ, ಪರಿಸರ ಸಂಸ್ಥೆ ಕಾರ‌್ಯದರ್ಶಿಕೆ.ಪಿ. ಅರುಣಕುಮಾರಿ ಇತರರು ಹಾಜರಿದ್ದರು.

ಈ ಸಂದರ್ಭದಲ್ಲಿ ವಿಶ್ವ ಓಜೋನ್ ದಿನದ ನಿಮಿತ್ತ ಚಿತ್ರಕಲಾ ಸ್ಪರ್ಧೆ, ವಿಜೇತ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಣೆ, ಸಸಿ ವಿತರಣೆ ಮತ್ತು ಸಸಿಗಳನ್ನು ನೆಡಲಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!