ಕೇಂದ್ರ ಸರ್ಕಾರ ವತಿಯಿಂದ 20 ಕೋಟಿ ಅನುದಾನ ತಂದು ರೈತರ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಲು ಹಾಗೂ ರೈತರಿಗೆ ತರಬೇತಿ ನೀಡುವ ಮೂಲಕ ಷೇರುದಾರರನ್ನು ಸೇರಿಸಿ ಆರ್ ಎಪಿಎಂಎಸ್ ವತಿಯಿಂದ ರೈತ ಉತ್ಪಾದಕ ಕಂಪನಿ ಸ್ಥಾಪನೆ ಮಾಡಲು ಆಡಳಿತ ಮಂಡಳಿ ಕ್ರಮವಹಿಸಿದೆ ಎಂದು ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ ಅಧ್ಯಕ್ಷ ಯು.ಸಿ.ಶೇಖರ್ ತಿಳಿಸಿದರು.
ಮಂಡ್ಯ ನಗರದ ಆರ್ ಎಪಿಎಂಎಸ್ ಸಂಘದ ಪ್ರಧಾನ ಕಚೇರಿ ಆವರಣದಲ್ಲಿ ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತದ 53ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭಾ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರ ಬೆಳೆಗೆ ಬೆಲೆ ಸಿಗಲು ,ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡಲಾಗುವುದು, ಸಂಘದಲ್ಲಿ ಸೌರ ವಿದ್ಯುತ್ ಅಳವಡಿಸಲು, ರೈತರಿಗೆ ತರಬೇತಿ ಕೊಟ್ಟು ಸಹಾಯ ಮಾಡಲು,ರೈತರ ಜಮೀನುಗಳಲ್ಲಿ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯಿಂದ ತರಬೇತಿ ಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಅಭಿವೃದ್ಧಿ ಕೆಲಸಕ್ಕೆ ಷೇರುದಾರರು ಸಹಕಾರ ಕೊಡಬೇಕೆಂದು ಮನವಿ ಮಾಡಿದರು.
ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣ ರೈತ ಸಭಾಂಗಣಕ್ಕೆ ಹತ್ತಿರವಿರುವುದರಿಂದ ಸಾರ್ವಜನಿಕರಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಆಡಳಿತ ಮಂಡಳಿ ಮುಂದಾಗಿದೆ ಎಂದರು.
ಸಂಘದಲ್ಲಿ ವಹಿವಾಟು ಕಡಿಮೆ ಯಾಗಿದೆ, 24,000 ಕ್ವಿಂಟಲ್ ಅಕ್ಕಿ ಬರುತ್ತಿದ್ದದ್ದು 12,000 ಕ್ವಿಂಟಾಲ್ ಗೆ ಇಳಿದಿದೆ.ಸೇವೆ ಮಾಡುವ ಸಂದರ್ಭ ದಲ್ಲಿ ಲಾಭಾಂಶ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಆರ್ಎಪಿಎಂಎಸ್ ಲಾಭ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಈಗಾಗಲೇ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಜಿಲ್ಲೆಯ ಶಾಸಕರುಗಳ ಸಹಕಾರದೊಂದಿಗೆ ರೈತ ಸಭಾಂಗಣವನ್ನು ನವೀಕರಣ ಮಾಡಲು ಆಡಳಿತ ಮಂಡಳಿ ಮುಂದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ ಉಪಾಧ್ಯಕ್ಷ ಜೆ.ಪಿ.ಮಹೇಶ್, ನಿರ್ದೇಶಕರಾದ ಬಿ.ಪಿ. ಸೋಮಶೇಖರ್, ಕೆ.ಸಿ.ರವೀಂದ್ರ, ಎನ್.ಪುನೀತ್, ಎಚ್.ಎಸ್. ಯೋಗೇಶ್ ಕುಮಾರ್, ಎಂ.ಪಿ. ಶ್ರೀಧರ್, ಜಿ.ಎನ್.ಉದಯ ಕುಮಾರ್, ಸಿ.ಕೆ.ಪಾಪಯ್ಯ,
ಕೆ.ಹೇಮಲತಾ, ಜಿ.ಎಸ್.ಅಂಜನಾ, ಕೆ.ಟಿ.ಚಂದ್ರಶೇಖರ್, ಎಚ್. ಅಶೋಕ್,ಎಚ್.ಆರ್. ನಾಗಭೂಷಣ್ ಸೇರಿದಂತೆ ಇತರರು ಹಾಜರಿದ್ದರು.