ಮಂಡ್ಯ ನಗರದ ಸಂತೋಷ್ ಪಿಯು ಕಾಲೇಜ್ ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದ ಏಕೈಕ ಕಾಲೇಜು ಆಗಿದ್ದು,ಇಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ ಎಂದು ಕಾಲೇಜಿನ ವಿದ್ಯಾರ್ಥಿನಿ ಸ್ನೇಹಾ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸ್ನೇಹಾ, ಕಾಲೇಜಿನ ವಿಶೇಷಗಳ ಬಗ್ಗೆ ಮಾಹಿತಿ ನೀಡಿದರು. ಕೊರೊನಾ ಸಂದರ್ಭದಲ್ಲಿ ನಮ್ಮ ಕಾಲೇಜಿನ ಪ್ರಾಧ್ಯಾಪಕರು ನಮ್ಮ ಮನೆಗಳಿಗೆ ಬಂದು ಪಾಠವನ್ನು ಹೇಳಿಕೊಡುತ್ತಿದ್ದರು. ಎಸ್ ಎಸ್ ಎಲ್ ಸಿ ವರೆಗೂ ಕನ್ನಡ ಮಾಧ್ಯಮದಲ್ಲಿ ವ್ಯಾಸಾಂಗ ಮಾಡಿರುವ ನಮಗೆ ಪಿಯುಸಿಯಲ್ಲಿ ವಿಜ್ಞಾನ ವಿಷಯ ಅಭ್ಯಾಸ ಮಾಡುವ ಸಂದರ್ಭದಲ್ಲಿ ಸಂತೋಷ್ ಅವರು ನಮಗೆ ಇಂಗ್ಲಿಷ್ ಕಲಿಸಿ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಲು ನೆರವಾದರು ಎಂದು ತಿಳಿಸಿದರು.
ಪ್ರತಿ ದಿನ ಸಂಜೆ 6 ಗಂಟೆಯವರೆಗೂ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು.ಭಾನುವಾರ ಕೂಡ ವಿಶೇಷ ತರಗತಿಗಳನ್ನು ನಡೆಸಿ ನಮಗೆ ಅರ್ಥವಾಗದ ಪಾಠಗಳನ್ನು ತಿಳಿಸಿಕೊಡುತ್ತಿದ್ದರು. ಇದು ಹೆಚ್ಚಿನ ಅಂಕ ಗಳಿಸಲು ನೆರವಾಯಿತು ಎಂದರು. ವಿದ್ಯಾರ್ಥಿನಿ ಕವನ ಮಾತನಾಡಿ, ನಾವು ಕನ್ನಡ ಮಾಧ್ಯಮದಿಂದ ಇಂಗ್ಲಿಷ್ ಮಾಧ್ಯಮಕ್ಕೆ ಹೋದಾಗ ಸ್ವಲ್ಪ ಕಷ್ಟವಾಯಿತು. ಆದರೆ ಸಂತೋಷ್ ಅವರು ತಮ್ಮ ಪಾಠಗಳ ಮೂಲಕ ಸರಳವಾಗಿ ಇಂಗ್ಲಿಷ್ ಕಲಿಸಿದರು. ಪ್ರತಿದಿನ ದಿನಪತ್ರಿಕೆಗಳನ್ನು ಓದಿಸುತ್ತಿದ್ದರು.ಇದರಿಂದ ನಮಗೆ ಅಗತ್ಯ ಮಾಹಿತಿಗಳನ್ನು ತಿಳಿದುಕೊಳ್ಳಲು ಅನುಕೂಲವಾಯಿತು ಎಂದರು.
ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಪಾಠ ಪ್ರವಚನಗಳನ್ನು ಮಾಡಿಸುತ್ತಿದ್ದರು. ಆಗಾಗ ಪೋಷಕರ ಸಭೆ ಕರೆದು ಮಕ್ಕಳು ಚೆನ್ನಾಗಿ ಓದುವಂತೆ ಪ್ರೋತ್ಸಾಹ ನೀಡುತ್ತಿದ್ದರು.ಈ ಎಲ್ಲಾ ಕಾರಣಗಳಿಂದ ನಾವು ನಾವು ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಯಿತು. ಇದರಿಂದ ನಮಗೂ, ಪೋಷಕರಿಗೂ ಬಹಳ ಸಂತೋಷವಾಗಿದೆ. ಇದಕ್ಕಾಗಿ ನಮ್ಮ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರಿಗೂ ಅಭಿನಂದನೆ ಸಲ್ಲಿಸುತ್ತೇವೆ ಎಂದರು. ವಿದ್ಯಾರ್ಥಿಗಳಾದ ಪ್ರಜ್ವಲ್, ಸಹನ,ಭವಿತ ಉಪಸ್ಥಿತರಿದ್ದರು.