ಕೇಂದ್ರ ಸರ್ಕಾರ ಜಿ ಎಸ್ ಟಿ ಯನ್ನು ರೈತರು ಗಾಣದಲ್ಲಿ ಉತ್ಪಾದಿಸುವ ಬೆಲ್ಲಕ್ಕೂ ವಿಧಿಸುತ್ತಿರುವುದು ಖಂಡನೀಯ ಎಂದು ಮಂಡ್ಯ ತಾಲೂಕು ಗಾಣದ ಮಾಲೀಕರ ಸಂಘದ ಅಧ್ಯಕ್ಷ ಸೋಮಶೇಖರ್ ಹೇಳಿದರು.
ಮಂಡ್ಯ ನಗರದ ಕಲ್ಲಹಳ್ಳಿಯಲ್ಲಿರುವ ಎಪಿಎಂಸಿ ಕಚೇರಿ ಸಭಾಂಗಣದಲ್ಲಿ ತಾಲೂಕು ಗಾಣದ ಮಾಲೀಕರ ಸಂಘದ ಪದಾಧಿಕಾರಿಗಳು ದಿಡೀರ್ ಸಭೆ ಸೇರಿ ಜುಲೈ 18ರಿಂದ ಬೆಲ್ಲಕ್ಕೂ ಶೇ.5ರಷ್ಟು ಜಿಎಸ್ಟಿ ವಿಧಿಸಿರುವುದನ್ನು ವಿರೋಧಿಸಿದರು.
ರೈತರ ಹಿತ ಕಾಯಬೇಕಾದ ಕೇಂದ್ರ ಸರ್ಕಾರವೇ ರೈತರು ಉತ್ಪಾದಿಸುವ ಬೆಲ್ಲಕ್ಕೂ ತೆರಿಗೆ ವಿಧಿಸುವಷ್ಟು ದುರ್ಬಲ ಆರ್ಥಿಕ ಪರಿಸ್ಥಿತಿ ಉಂಟಾಗಿದೆ ಎಂದರೆ ಎಂತಹ ದುರಾಡಳಿತ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಗಾಣದ ಮಾಲೀಕರ ಸಂಘದ ಕಾರ್ಯದರ್ಶಿ ಜಯಶಂಕರ್ ಅವರು, ಬೆಲ್ಲಕ್ಕೂ ಜಿಎಸ್.ಟಿ. ತಂದಿರುವುದು ದುರಂತ.ಇದರಿಂದಾಗಿ ಬೆಲ್ಲ ಉತ್ಪಾದಕರು ಮತ್ತು ಖರೀದಿದಾರರಿಗೂ ಹೆಚ್ಚು ಹೊರೆ ಬೀಳಲಿದೆ. ಬೆಲ್ಲ ಖರೀದಿ ಮಾಡುವುದನ್ನು ನಿಲ್ಲಿಸಿದರೆ ನಷ್ಟವಾಗುತ್ತದೆ, ಕಬ್ಬು ಕಟಾವು ಮಾಡುವುದು ಮತ್ತು ಆಲೆಮನೆಗಳಲ್ಲಿ ಬೆಲ್ಲ ತಯಾರಿಸುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.
ಜಿ.ಎಸ್.ಟಿ, ವಿರೋಧಿಸಿ ಹೋರಾಟ ಮಾಡುವ ಅನಿವಾರ್ಯವಿದೆ. ದಕ್ಷಿಣ ಭಾರತದ ಸಂಸದರು ಮತ್ತು ರಾಜ್ಯಸಭಾ ಸದಸ್ಯರು ಇದರತ್ತ ಗಮನ ಸೆಳೆಯಬೇಕಿದೆ. ಶೇ.5ರಷ್ಟು ವಿಧಿಸಿರುವ ತೆರಿಗೆಯನ್ನು ವಾಪಸ್ ಪಡೆಯಲು ಸರ್ಕಾರಗಳಿಗೆ ಒತ್ತಡ ಹೇರಬೇಕಿದೆ ಎಂದು ಒತ್ತಾಯಿಸಿದರು.
ಕಬ್ಬಿನ ಗಾಣದಿಂದ ವಾರ್ಷಿಕ 17ಲಕ್ಷ ಟನ್ ಕಬ್ಬು ಅರೆದು ಬೆಲ್ಲ ತಯಾರಾಗುತ್ತಿದೆ. ಗಾಣಗಳನ್ನು ಸ್ಥಗಿತಗೊಳಿಸಿದರೆ ಕಾರ್ಖಾನೆಗಳು ಕಬ್ಬು ಅರೆಯಲು ಸಾಧ್ಯವಿಲ್ಲ, ಇದರಿಂದ ರೈತರಿಗೆ ಮತ್ತಷ್ಟು ನಷ್ಟವಾಗುತ್ತದೆ, ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯಲು ಗಾಣದ ಮಾಲೀಕರು ಮುಂದಾಗಬೇಕಿದೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಗಾಣದ ಮಾಲೀಕರಾದ ಬೋರೇಗೌಡ, ಬಸವಣ್ಣ, ಯಶವಂತ್, ವೆಂಕಟೇಶ್, ಅರ್ಜುನ್, ಮಹದೇವು ವೆಂಕಟೇಶ್, ಪಾಪಣ್ಣ, ಮಹೇಶ್ ಮತ್ತಿತರರಿದ್ದರು.