ಮಂಡ್ಯ ತಾಲ್ಲೂಕಿನ ಬಸರಾಳು ಹೋಬಳಿಯ ಅಂಕುಶಾಪುರ ಕೆರೆ ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ಕೋಡಿ ಬಿದ್ದು ಹರಿಯುತ್ತಿದೆ.
ಮಂಡ್ಯ ತಾಲ್ಲೂಕಿನ ಗಡಿ ಗ್ರಾಮವಾದ ಅಂಕುಶಾಪುರದಲ್ಲಿ ಸೋಮವಾರ ರಾತ್ರಿ ಬಿದ್ದ ಭಾರೀ ಮಳೆಯಿಂದಾಗಿ ಹೆಚ್ಚಿನ ನೀರು ಕೆರೆಗೆ ಬಂದು ಕೋಡಿ ಬಿದ್ದ ಪರಿಣಾಮ ನೀರು ಹರಿದು ಕೋಡಿ ಮುಂಭಾಗದಲ್ಲಿದ್ದ ಗೋಡೆಯ ರಕ್ಷಣೆಗಾಗಿ ಇದ್ದ ಕಲ್ಲುಗಳು ಸಂಪೂರ್ಣ ವಾಗಿ ಕಿತ್ತು ಹೋಗಿದೆ. ಅಲ್ಲದೆ ಕೋಡಿ ಮುಂಭಾಗದ ರಸ್ತೆಯು ಕೂಡ ನೀರಿನಿಂದ ಕೊಚ್ಚಿ ಹೋಗಿದೆ.
ಅಂಕುಶಾಪುರ ಕೆರೆಯು ಬಸರಾಳುವಿನಲ್ಲಿರುವ ಹೇಮಾವತಿ ಉಪ ವಿಭಾಗದ ವ್ಯಾಪ್ತಿಗೆ ಬರುತ್ತದೆ.ಕೂಡಲೇ ಕೆರೆಗೆ ಹೇಮಾವತಿ ಕಾಲುವೆ ಯಿಂದ ಬಿಡುತ್ತಿರುವ ನೀರನ್ನು ನಿಲ್ಲಿಸಲು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹಾಗೂ ಜಿಲ್ಲಾಡಳಿತ ಸೂಚಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಕೂಡಲೇ ಜಿಲ್ಲಾಡಳಿತ ಕೆರೆ ಕೋಡಿಯ ಗೋಡೆಯನ್ನು ದುರಸ್ತಿ ಪಡಿಸಿ,ಕಿತ್ತು ಹೋಗಿರುವ ರಸ್ತೆ ಸರಿಪಡಿಸಿ ಕೊಡಬೇಕೆಂದು ಅಂಕುಶಾಪುರ ಗ್ರಾಮಸ್ಥರು ಆಗ್ರಹಿಸಿದ್ದಾರೆ.