ಕಿರುಗಾವಲು ಕೃಷಿ ಪತ್ತಿನ ಸಹಕಾರ ಸಂಘವು ಉತ್ತಮ ಲಾಭದಲ್ಲಿ ನಡೆಯುತ್ತಿದ್ದು,44 ಕೋಟಿ ರೂ.ವಹಿವಾಟು ನಡೆಸಿ ಸುಮಾರು 12 ಲಕ್ಷ ರೂ.ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಪಿ ನರೇಂದ್ರ ಕೆ.ಎಂ ಪುಟ್ಟು ತಿಳಿಸಿದರು.
ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ನಿಂದ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ ಪಡೆದಿದೆ.
ಸೇವಾದಾರರು ಮತ್ತು ಠೇವಣಿದಾರರ ಸಹಕಾರದೊಂದಿಗೆ ಮುಂದಿನ ಸಾಲಿನಲ್ಲಿ 50 ಕೋಟಿಗೂ ಹೆಚ್ಚು ವಹಿವಾಟು ನಡೆಸಬೇಕೆಂದು ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
ಸಂಘದ ವತಿಯಿಂದ ಶವ ಸಂಸ್ಕಾರದ ಅನುಕೂಲಕ್ಕಾಗಿ ಅಂತಿಮ ಯಾತ್ರೆ ವಾಹನವನ್ನು ಸಾರ್ವಜನಿಕರ ಸೇವೆಗೆ ನೀಡಲಾಗಿದೆ.ಪಡಿತರ ವಿತರಣೆ,ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆಗೆ ಅನುಕೂಲಕ್ಕಾಗಿ ಹೊಸ ಕಟ್ಟಡ ನಿರ್ಮಿಸಲಾಗಿದೆ. ಸಭೆ ನಡೆಸಲು ನೂತನ ಸಭಾಂಗಣವನ್ನು ಕಟ್ಟಲಾಗಿದೆ ಎಂದರು.
ಸಹಕಾರ ಸಂಘದ ವತಿಯಿಂದ ಬೆಳೆಸಾಲ, ಸಣ್ಣ ವ್ಯಾಪಾರಿಗಳು, ಸ್ತ್ರೀ ಶಕ್ತಿ ಸಂಘ,ಹೈನುಗಾರಿಕೆ, ವಾಹನ ಖರೀದಿ ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿವಿಧ ರೀತಿಯಲ್ಲಿ ಸಾಲ ನೀಡಲಾಗಿದೆ.ಶೇ.100 ರಷ್ಟು ವಸೂಲಾತಿಯೂ ಆಗುತ್ತಿದೆ ಎಂದರು.
ಅಂತಿಮ ಸಂಸ್ಕಾರ ಮಾಡುವ ಸಂದರ್ಭದಲ್ಲಿ ಶವವನ್ನು ಒತ್ತುಕೊಂಡು ಹೋಗಲು ಕಷ್ಟವಾಗುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲಕ್ಕಾಗಿ ಅಂತಿಮ ಯಾತ್ರೆ ವಾಹನವನ್ನು ನೀಡಲಾಗುತ್ತಿದೆ. ಕಿರುಗಾವಲು ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮದವರು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ ಸೈಯದ್ಸುಲ್ತಾನ್, ನಿರ್ದೇಶಕರಾದ ಮೋಹಮದ್ ಜಫರ್ ಉಲ್ಲಾಖಾನ್, ಶಿವಕುಮಾರ್, ಎಂ.ಎಸ್. ನಿಂಗೇಗೌಡ, ರಾಜು, ಎಂ.ಚಿಕ್ಕಯ್ಯ, ಮಾದಯ್ಯ, ಭಾಗ್ಯ, ಯಶೋಧಮ್ಮ, ಕೆ.ಎಂ. ಜಗದೀಶ್, ರಾಜಣ್ಣ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿವಲಿಂಗ, ಮುಖಂಡರಾದ ಪ್ರಕಾಶ್ ಸೇರಿದಂತೆ ಇತರರಿದ್ದರು.