ಮಳವಳ್ಳಿ ತಾಲ್ಲೂಕಿನ ಹಲಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯ ನಿರ್ವಹಿಸುವ 20 ಕುಟುಂಬಗಳಿಗೆ ನಿವೇಶನಗಳು ಹಾಗೂ ಸ್ವಂತ ಮನೆಗಳನ್ನು ಒದಗಿಸಬೇಕೆಂದು ಅಖಿಲ ಕರ್ನಾಟಕ ಅರುಂಧತಿಯಾರ್ ಮಹಾಸಭಾದ ಜಿಲ್ಲಾಧ್ಯಕ್ಷೆ ಕೆ.ನಾಗಮಣಿ ಒತ್ತಾಯಿಸಿದರು.
ಕಳೆದ 20 ವರ್ಷಗಳಿಂದ ಈ ಕುಟುಂಬಗಳು ಸ್ವಚ್ಚತಾ ಕಾರ್ಯಗಳನ್ನು ನಿರ್ವಹಿಸುತ್ತಾ ಬರುತ್ತಿದ್ದು, ಹಲವು ವರ್ಷಗಳಿಂದ ಈ ಕುಟುಂಬಗಳು ವಸತಿ ಒದಗಿಸುವಂತೆ ಹಲವು ಹೋರಾಟ, ಮನವಿ ಪತ್ರಗಳನ್ನು ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತಗಳಿಗೆ ಸಲ್ಲಿದರೂ, ಇದುವರೆಗೆ ನಮಗೆ ಸೂರು ಲಭ್ಯವಾಗಿಲ್ಲ ಎಂದು ಅವರು ಸುದ್ದಿಗೋಷ್ಟಿಯಲ್ಲಿ ದೂರಿದರು.
ಹಲಗೂರು ಕೆರೆಯಂಗಳದಲ್ಲಿ ಕಟ್ಟಿಕೊಂಡಿದ್ದ ಗುಡಿಸಲುಗಳು ಇತ್ತಿಚ್ಚೀಗೆ ಸುರಿದ ಭಾರಿ ಮಳೆಯಿಂದಾಗಿ ಜಲಾವೃತವಾಗಿವೆ, ನಮ್ಮ ಪಾತ್ರೆ, ಬಟ್ಟೆಗಳು ಹಾಗೂ ಅಮೂಲ್ಯ ದಾಖಲಾತಿಗಳು ನೀರು ಪಾಲಾಗಿವೆ, ಊಟ, ಬಟ್ಟೆ ಇಲ್ಲದೆ ನಿರಾಶ್ರಿತರಾಗಿದ್ದೇವೆ, ಗಂಜಿ ಕೇಂದ್ರಗಳಲ್ಲಿ ನಮಗೆ ಸರಿಯಾದ ಸೌಲಭ್ಯಗಳು ಲಭ್ಯವಾಗುತ್ತಿಲ್ಲ, ಈ ಬಗ್ಗೆ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತಗಳು ನಿರ್ಲಕ್ಷ್ಯ ವಹಿಸಿವೆ ಎಂದು ಆರೋಪಿಸಿದರು.
ಅಂಗನವಾಡಿಗಳಲ್ಲಿ ಅಸ್ಪೃಶ್ಯತೆ
ಹಲಗೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಅಂಗನವಾಡಿಗಳಲ್ಲಿ ದಲಿತ ಮಕ್ಕಳನ್ನು ಪ್ರತ್ಯೇಕವಾಗಿ ಕೂರಿಸಿ, ಬಹಿರಂಗವಾಗಿ ಅಸ್ಪೃಶ್ಯತೆ ಆಚರಣೆ ಮಾಡಲಾಗುತ್ತಿದೆ ಎಂದು ಕೆ.ನಾಗಮಣಿ ದೂರಿದರು.
ಈ ಬಗ್ಗೆ ಶಾಸಕ ಅನ್ನದಾನಿ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ, ತಾರತಮ್ಯ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ ಎಂದು ದೂರಿದರು.
ಸುದ್ದಿಗೋಷ್ಟಿಯಲ್ಲಿ ಸಂಘದ ಸದಸ್ಯರಾದ ಭದ್ರಸ್ವಾಮಿ, ನಾಗರಾಜು, ಮಹದೇವಸ್ವಾಮಿ ಹಾಗೂ ರೇಖಾ ಉಪಸ್ಥಿತರಿದ್ದರು.