ಇತ್ತಿಚೀನ ದಿನಗಳಲ್ಲಿ ಕೇಳಿ ಬರುತ್ತಿರುವ ಲೈಂಗಿಕ ದೌರ್ಜನ್ಯಗಳಿಂದಾಗಿ ಜನಸಾಮಾನ್ಯರು, ಮಠಗಳು ಹಾಗೂ ಅಲ್ಲಿನ ಸ್ವಾಮಿಗಳನ್ನು ಸಂಶಯದಿಂದ ನೋಡುವಂತಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಹೇಳಿದರು.
ಮಂಡ್ಯದಲ್ಲಿ ಸುದ್ಧಿಗೋಷ್ಟಿ ಮಾತನಾಡಿದ ಅವರು, ಮುರುಘಾ ಮಠದ ಶಿವಯೋಗಿ ಶರಣರು ಹಾಗೂ ಮಂಡ್ಯದ ಚಿನ್ನದ ವ್ಯಾಪಾರಿ ಜಗನ್ನಾಥ ಶೆಟ್ಟಿಯವರ ವಿರುದ್ಧ ಕೇಳಿ ಬಂದಿರುವ ಆರೋಪವನ್ನು ಮಾನವೀಯತೆಯುಳ್ಳ ಯಾವುದೇ ವ್ಯಕ್ತಿಯು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ, ಇಂತಹ ಲೈಂಗಿಕ ದೌರ್ಜನ್ಯಗಳಿಂದ ಸಮಾಜ ತಲೆ ತಗ್ಗಿಸುವಂತೆ ಆಗಿದೆ, ಜಾತಿ ಧರ್ಮಗಳ ಹೆಸರಿನಲ್ಲಿ ಕೊಲ್ಲುವುದು ಕೂಡ ಹೇಯವಾದ ಕೃತ್ಯವಾಗಿದೆ ಎಂದರು.
ಮನುಷ್ಯನ ಅಭ್ಯುದಯಕ್ಕೆ ಅಡ್ಡಿಪಡಿಸುವ ಯಾವ ಜಾತಿಯಾಗಲಿ, ಧರ್ಮಗಳಾಗಿ ನಿಜವಾಗಿ ಅವು ಜಾತಿ, ಧರ್ಮಗಳೆನಿಸಿಕೊಳ್ಳಲು ಸಾಧ್ಯವಿಲ್ಲ, ಹಿಂದೆ ಶಾಲಾ ಮಕ್ಕಳಿಕೆ ನೋಟ್ ಬುಕ್, ಬ್ಯಾಗುಗಳನ್ನು ವಿತರಿಸುವ ಕೆಲಸ ನಡೆಯುತ್ತಿತ್ತು. ಆದರೆ ಈಗ ಉಚಿತವಾಗಿ ಗಣೇಶ ಮೂರ್ತಿಗಳನ್ನು ವಿತರಿಸುವ ಕೆಲಸ ನಡೆಯುತ್ತಿದೆ, ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ಕೆಲಸ ಮಾಡುತ್ತಿದ್ದಾರೆ ಎಂದು ನುಡಿದರು.
ಇದು ಚುನಾವಣೆ ವರ್ಷವಾದ್ದರಿಂದ ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ, ಆದರೆ ಇಷ್ಟು ವರ್ಷಗಳಲ್ಲಿ ಇಂತಹ ಕೆಲಸಗಳನ್ನು ಯಾಕೆ ಮಾಡಲಿಲ್ಲ ?, ಇದು ಚುನಾವಣೆ ಮೇಲೆ ಕಣ್ಣಿಟ್ಟಿರುವ ರಾಜಕೀಯ ಪುಡಾರಿಗಳು ಮಾಡುವ ಕೆಲಸವಾಗಿದೆ, ಇಂತಹ ಅಗ್ಗದ ತಂತ್ರಗಳಿಗೆ ಜನರು ಮಾರಾಟವಾಗುತ್ತಿರುವುದು ನೈತಿಕ ಅಧಃಪತನವನ್ನು ತೋರಿಸುತ್ತಿದೆ, ಬಟ್ಟೆ, ಬಿರಿಯಾನಿ, ಮದ್ಯ ಇಂತಹ ಕೇವಲ ಸಾವಿರ ರೂಪಾಯಿ ಬೆಲೆ ಬಾಳುವ ವಸ್ತುಗಳಿಗೆ ಭಿಕ್ಷುಕರಂತೆ ಕೈ ಚಾಚುವುದು ನಾಚಿಕೆಗೇಡಿನ ಸಂಗತಿ ಎಂದರು.
ವಾರ್ಷಿಕ ಮಹಾಸಭೆ
ಮಂಡ್ಯನಗರದಲ್ಲಿರುವ ಕರ್ನಾಟಕ ಸಂಘದ ವಾರ್ಷಿಕ ಮಹಾಸಭೆಯು ಸೆ.18ರಂದು ಸಂಜೆ 4 ಗಂಟೆಗೆ ಕರ್ನಾಟಕ ಸಂಘದಲ್ಲಿ ನಡೆಯಲಿದೆ ಎಂದರು.
ಸಂಘದಲ್ಲಿ ಇದುವರೆಗೆ 5400 ಮಂದಿ ಸದಸ್ಯತ್ವ ಪಡೆದಿದ್ದು, ಎಲ್ಲಾ ಸದಸ್ಯರು ತಪ್ಪದೇ ಸಭೆಗೆ ಆಗಮಿಸಬೇಕೆಂದು ಕೋರಿದರು.
ದೆಹಲಿಗೆ ನಾಟಕ ತಂಡ
ದೆಹಲಿ ಕನ್ನಡದ ಸಂಘಕ್ಕೆ 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ಅಕ್ಟೋಬರ್ 15 ಮತ್ತು 16ರಂದು ದೆಹಲಿಯಲ್ಲಿ ವಾರ್ಷಿಕೋತ್ಸವ ನಡೆಯುತ್ತಿದ್ದು, ಈ ಸಮಾರಂಭದಲ್ಲಿ ಮಂಡ್ಯದ 2 ಶಾಲಾ ಮಕ್ಕಳ ತಂಡಗಳು ಭಾಗವಹಿಸಿ ನಾಟಕಗಳನ್ನು ಪ್ರದರ್ಶನ ನೀಡಲಿವೆ, 70 ಶಾಲಾ ಮಕ್ಕಳು ಸೇರಿದಂತೆ ಒಟ್ಟು 110 ಮಂದಿ ದೆಹಲಿಗೆ ತೆರಳುವರು ಎಂದರು.
ಗೋಷ್ಟಿಯಲ್ಲಿ ಸಂಘದ ಪದಾಧಿಕಾರಿಗಳಾದ ಲೋಕೇಶ್ ಚಂದಗಾಲು, ಹರೀಶ್ ಕುಮಾರ್, ಮಂಜುಳ ಉದಯಶಂಕರ್, ನಾಗಪ್ಪ ಹಾಗೂ ಮದನ್ ಮೋಹನ್ ಉಪಸ್ಥಿತಿದರಿದ್ದರು.