ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಜೀವದ ಹಂಗು ತೊರೆದು ಹೋರಾಡಿದ ಆರೋಗ್ಯ ಕಾರ್ಯಕರ್ತರ ಸೇವೆ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ರಂಗೇಗೌಡ ತಿಳಿಸಿದರು.
ಮಂಡ್ಯ ನಗರದ ಎಇಟಿ ನರ್ಸಿಂಗ್ ಕಾಲೇಜಿನ ಆವರಣದಲ್ಲಿ ಇಂದು ಆಯೋಜಿಸಿದ್ದ ದಾದಿಯರ ದಿನಾಚರಣೆ ಹಾಗೂ ನೂತನ ವರ್ಷದ ಜ್ಯೋತಿ ಬೆಳಗು, ಪ್ರಮಾಣ ಘೋಷಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ದಾದಿಯರು ಹಾಗೂ ಆರೋಗ್ಯ ಕಾರ್ಯಕರ್ತರ ಪಾತ್ರ ಪ್ರಮುಖ. ಸೋಂಕಿತ ರೊಂದಿಗೆ ಸತತ ಸಂಕರ್ಪ ಹೊಂದಿದ್ದ ಇವರು ತಮ್ಮ ಜೀವದ ಹಂಗು ತೊರೆದು ಕೊರೊನಾ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡರು ಎಂದು ಬಣ್ಣಿಸಿದರು.
1853ರಲ್ಲಿ ರಷ್ಯಾ ಹಾಗೂ ಬ್ರಿಟನ್ ನಡುವೆ ನಡೆದ ಕ್ರಿಮಿಯನ್ ಯುದ್ಧದಲ್ಲಿ ಗಾಯಗೊಂಡಿದ್ದ ಬ್ರಿಟಿಷ್ ಸೈನಿಕರಿಗೆ ಅಕ್ಷರಶಃ ದೇವತೆಯಂತೆ ಕಂಡಿದ್ದ ಫ್ಲಾರೆನ್ಸ್ ನೈಟಿಂಗೇಲ್, ಸ್ವಚ್ಚತೆಗೆ ಆದ್ಯತೆ ಕೊಡುವ ಮೂಲಕ ಗಣನೀಯವಾಗಿ ಸಾವಿನ ಸಂಖ್ಯೆಯನ್ನು ತಪ್ಪಿಸಿದರು. ಹಾಗಾಗಿ ಅವರನ್ನು ಆಧುನಿಕ ನರ್ಸಿಂಗ್ ವ್ಯವಸ್ಥೆಗೆ ಮುನ್ನುಡಿ ಬರೆದವರು ಎಂದೇ ಕರೆದು,ಅವರ ಜನ್ಮ ದಿನವನ್ನು ವಿಶ್ವ ದಾದಿಯರ ದಿನವೆಂದು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಕೇವಲ ಕೊರೋನಾ ಯೋಧರು ಎಂದು ಕರೆದರೆ ಸಾಲದು. ಇಡೀ ರಾತ್ರಿ ಗಾಯಾಳು ಸೈನಿಕರಿಗೆ ಕೈಯಲ್ಲಿ ದೀಪ ಹಿಡಿದು ಉಪಚರಿಸುತ್ತಿದ್ದ ಫ್ಲಾರೆನ್ಸ್ ಅವರು ದೀಪಧಾರಿಣಿ ದೇವತೆಯಾಗಿ ಕಂಗೊಳಿಸಿದ್ದರು. ಅದೇ ಮಾದರಿಯಲ್ಲಿ ಕೊರೊನಾ ವೈರಸ್ ಹಾವಳಿ ಸಂದರ್ಭದಲ್ಲಿ ಮನುಕುಲದ ಸೇವೆಗೆ ಎಲ್ಲವನ್ನೂ ತ್ಯಾಗ ಮಾಡಿದ ದಾದಿಯರೂ ಸಹ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದನ್ನು ಯಾರೂ ಮರೆಯುವಂತಿಲ್ಲ ಎಂದರು. ಜಿ.ಪಂ.ಮಾಜಿ ಸದಸ್ಯ ಎನ್.ರಾಜು ಮಾತನಾಡಿ, ಮಂಡ್ಯದಲ್ಲಿ ಕೇವಲ ಬೆರಳೆಣಿಕೆಯ ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾದ ಎಇಟಿ ಸಂಸ್ಥೆಯಲ್ಲಿ ಇಂದು 300ಕ್ಕೂ ಹೆಚ್ಚು ಮಂದಿ ವ್ಯಾಸಂಗ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞ ಡಾ.ಎಚ್.ವಿ.ನರೇಂದ್ರಬಾಬು, ಡಾ.ಶಶಿಕಲಾ ವೆಂಕಟೇಶ್, ಸಂಸ್ಥೆಯ ಅಧ್ಯಕ್ಷ ಎಂ.ಎಸ್.ನಾಗಚಂದ್ರ, ಎಸ್.ಎಂ.ನಂದಿನಿ, ಸಿಸ್ಟರ್ ಅಡೋನಾ, ಜೈಭಾರತಿ ಮತ್ತಿತರರು ಹಾಜರಿದ್ದರು.