ಪ್ರಧಾನಿ ನರೇಂದ್ರ ಮೋದಿ ನಮ್ಮ ಪ್ರಕಾರ ವಿಶ್ವದ ನಾಯಕ. ಆದರೆ ರಾಜ್ಯದ ಚುನಾವಣೆಯ ಸಂದರ್ಭ ಅವರನ್ನು ರಾಜ್ಯದ ಗಲ್ಲಿಗಲ್ಲಿ ಸುತ್ತಿಸಿ ಒಂದು ರೀತಿಯಲ್ಲಿ ಅವಮಾನ ಮಾಡಿದಂಗಾಗಿತ್ತು. ಇದು ಕೂಡ ಜನರ ಆಕ್ರೋಶಕ್ಕೆ ಕಾರಣವಾಗಿ ಬಿಜೆಪಿ ಸೋಲಿಗೆ ಕಾರಣವಾಯಿತು ಎಂದು ಹೊನ್ನಾಳಿ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ.
ಹೊನ್ನಾಳಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಯಡಿಯೂರಪ್ಪನವರನ್ನು ಕೆಳಗಿಳಿಸಿದ್ದೇ ನಮ್ಮ ಸೋಲಿಗೆ ಕಾರಣ. ಸರ್ಕಾರದ ಕೆಲವೊಂದು ತಪ್ಪು ನಿರ್ಧಾರಗಳು ಕೂಡ ಸೋಲಿಗೆ ಕಾರಣವಾಯಿತು ಎಂದು ಬಿಜೆಪಿ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.’
ಒಳ ಮೀಸಲಾತಿಗೆ ಕೈಹಾಕಬೇಡಿ ಎಂದು ಹೇಳಿದರೂ ನಾಯಕರು ಕೈಹಾಕಿದರು. ಮೀಸಲಾತಿ ಗೊಂದಲದ ನಿರ್ಣಯಗಳೇ ಬಿಜೆಪಿಗೆ ಮುಳುವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಗುಜರಾತ್ ಮಾದರಿಯನ್ನು ಟೀಕಿಸಿ, ಪರೋಕ್ಷವಾಗಿ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಬೆಟ್ಟು ಮಾಡಿದ ರೇಣುಕಾಚಾರ್ಯ, ಜಗದೀಶ್ ಶೆಟ್ಟರ್ ಹಾಗೂ ಈಶ್ವರಪ್ಪನವರಿಗೆ ಟಿಕೆಟ್ ತಪ್ಪಿಸಿದ್ದನ್ನು ಹಾಗೂ ಯಡಿಯೂರಪ್ಪನವರನ್ನು ಕೆಳಗಿಳಿಸಿದ್ದನ್ನು ಉಲ್ಲೇಖಿಸಿದರು.
‘ಬಿಜೆಪಿ ರಾಜ್ಯಾಧ್ಯಕ್ಷರು ಗೊಂದಲ ಹೇಳಿಕೆ ನೀಡುತ್ತಾ ಬಂದಿದ್ದಾರೆ. ಶೆಟ್ಟರ್, ಈಶ್ವರಪ್ಪ ಸೇರಿ ಹಲವು ನಾಯಕರಿಗೆ ಟಿಕೆಟ್ ತಪ್ಪಿಸಿದರು. ಈಶ್ವರಪ್ಪನವರು ಓಡಾಟ ಮಾಡ್ತಾ ಇರಲಿಲ್ವಾ. ಜಗದೀಶ್ ಶೆಟ್ಟರ್ ಅವರಿಗೆ ಬಹಳ ವಯಸ್ಸಾಗಿತ್ತಾ? ಗುಜರಾತ್ ಮಾದರಿ ಎಂದು ಹೇಳಿ ಬಹಳಷ್ಟು ಹೊಸ ಮುಖಗಳಿಗೆ ಟಿಕೆಟ್ ಕೊಟ್ಟು ಹಿರಿಯರನ್ನು ಕಡೆಗಣಿಸಿ ಬಹಳ ದೊಡ್ಡ ತಪ್ಪು ಮಾಡಿದ್ದಾರೆ. ಜನರ ಆಕ್ರೋಶವೂ ಹೆಚ್ಚಾಗಿತ್ತು. ಇವೆಲ್ಲವೂ ಚುನಾವಣೆಯಲ್ಲಿ ಸೋಲಿಗೆ ಕಾರಣವಾಯಿತು’ ಎಂದು ಹೊನ್ನಾಳಿಯ ಮಾಜಿ ಶಾಸಕ ರೇಣುಕಾಚಾರ್ಯ ಸಪಕ್ಷೀಯರ ವಿರುದ್ಧವೇ ಕಿಡಿಕಾರಿದರು.
ಎನ್ಪಿಎಸ್ ಕುರಿತು ಸರ್ಕಾರ ಮನವಿ ಸ್ವೀಕರಿಸಿ ಎಂದು ಕೇಳಿದರೂ ನಾಯಕರು ಸ್ವೀಕರಿಸಲಿಲ್ಲ. ಚುನಾವಣಾ ಪ್ರಣಾಳಿಕೆ ಸಮಿತಿಗೆ ಡಾ.ಕೆ.ಸುಧಾಕರ್ ಅವರನ್ನು ತಂದು ಕೂರಿಸಿದರು. ಡಾ.ಕೆ.ಸುಧಾಕರ್ ಕೆಲಸಕ್ಕೆ ಬಾರದ ಪ್ರಣಾಳಿಕೆ ಮಾಡಿದ್ದಾರೆ ಎಂದು ‘ಬಾಂಬೆ ಬಾಯ್ಸ್’ ಬಳಗದ ಸುಧಾಕರ್ ವಿರುದ್ಧವೂ ಹೊನ್ನಾಳಿ ಶಾಸಕ ಆಕ್ರೋಶ ಹೊರಹಾಕಿದರು.
ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಾನೂ ಸಮರ್ಥನಿದ್ದೇನೆ. ಶಾಸಕ, ಸಚಿವನಾಗಿ ಅನುಭವ ಇದೆ, ಅದರೆ ಒತ್ತಡ ಹೇರುವುದಿಲ್ಲ. ವಿ.ಸೋಮಣ್ಣ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೇಳಿದ್ದು ನನಗೆ ಗೊತ್ತಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತು ಬಿಜೆಪಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಬಳಿಕ, ಬಿಜೆಪಿಯೊಳಗಡೆ ಅಸಮಾಧಾನದ ಹೊಗೆ ಭುಗಿಲೆದ್ದಿದೆ. ಇದರ ಹೊಸ ಭಾಗವಾಗಿ ಇಂದು ರೇಣುಕಾಚಾರ್ಯ ಈ ಹೇಳಿಕೆಗಳನ್ನು ನೀಡಿದ್ದಾರೆ.