ವರದಿ: ಪ್ರಭು ವಿ.ಎಸ್
ಮದ್ದೂರು, ಮೈಸೂರು ಹಾಗೂ ಶ್ರಿರಂಗಪಟ್ಟಣ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮನೆಗಳ್ಳತನ ನಡೆಸಿದ್ದ 8 ಜನ ಆರೋಪಿಗಳನ್ನು ಬಂಧಿಸಿರುವ ಮದ್ದೂರು ಪೊಲೀಸರು, ಅವರಿಂದ 37 ಲಕ್ಷ ರೂ. ಮೌಲ್ಯದ 634 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಮನೆ ಕಳ್ಳತನದ ಆರೋಪದ ಮೇಲೆ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಸಂತೆಸರಗೂರಿನ ಫೈಯಜ್ ಅಹಮದ್, ಈತನ ಮಗ ಮಹಮದ್ ಸಾದತ್, ಮಹಮ್ಮದ್ ಮುನ್ನಾ, ಸೈಯದ್ ಅಯೂಬ್, ಪ್ರಸಾದ್ ಆರ್., ಜಿ.ಆರ್.ಗಿರೀಶ್, ಭುವನ ಹಾಗೂ ಶ್ರೀರಂಗಪಟ್ಟಣದ ಪೊಲೀಸ್ ಪೇದೆ ಕೆಂಡಗಣ್ಣ ಎಂಬುವರನ್ನು ಬಂಧಿಸಲಾಗಿದೆ. ಪೊಲೀಸ್ ಪೇದೆಯನ್ನು ಆರೋಪಿಗಳು ಕದ್ದಿದ್ದ ಮಾಲುಗಳನ್ನು ಮಾರಾಟ ಮಾಡಲು ಸಹಾಯ ಮಾಡಿದ್ದ ಆರೋಪದ ಮೇಲೆ ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಜ.17ರಂದು ಮದ್ದೂರು ಪಟ್ಟಣದ ಕೆ.ಎಚ್.ನಗರದ ಡಾ.ಚಂದ್ರು ಎಂಬುವರ ಮನೆಗೆ ನುಗ್ಗಿದ ಈ ಕಳ್ಳರು 1 ಕೆ.ಜಿ ಯಷ್ಟು ಚಿನ್ನಾಭರಣ ಹಾಗೂ 8 ಲಕ್ಷ ರೂ ನಗದನ್ನು ಕಳವು ಮಾಡಿದ್ದರು, ಈ ಬಗ್ಗೆ ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ಮಂಡ್ಯ ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕರಾದ ಸಿ.ಇ. ತಿಮ್ಮಯ್ಯ, ಎಸ್.ಇ.ಗಂಗಾದರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಮಳವಳ್ಳಿ ಡಿ.ಎಸ್.ಪಿ. ಕೃಷ್ಣಪ್ಪ, ವಿ. ಅವರ ನೇತೃತ್ವದಲ್ಲಿ ಪಿಐಗಳಾದ ಪ್ರಸಾದ್ ಕೆ.ಆರ್., ಶಿವಕುಮಾರ್ ಎಂ. ಮದ್ದೂರು ಠಾಣೆ ಸಿಪಿಐ ವೆಂಕಟೇಗೌಡ, ಸಿಪಿ.ಎಸ್.ಐ.ಗಳಾದ ಮಂಜುನಾಥ ಕೆ., ರವಿ ಪಿ., ಮಲ್ಲಪ್ಪ, ಸಿಬ್ಬಂದಿಯವರಾದ ಗುರುಪ್ರಸಾದ್, ಕುಮಾರಸ್ವಾಮಿ, ಪ್ರಭುಸ್ವಾಮಿ, ಮಹೇಶ, ಚಿರಂಜೀವಿ ಪೂಜಾರ್, ವಿಷ್ಣುವರ್ಧನ, ಓಂಕಾರಪ್ಪ, ಶರತ್, ಗಿರೀಶ, ರವಿಕಿರಣ್ ಮತ್ತು ಲೋಕೇಶ್, ರಜಿತ್, ಚಲುವರಾಜು ತಂಡ ರಚನೆ ಮಾಡಲಾಗಿತ್ತು. ಈ ತಂಡವು ಎಲ್ಲಾ ಆಯಾಮಗಳ ಮೂಲಕ ತನಿಖೆ ಕೈಗೊಂಡು 8 ಜನ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ರಾತ್ರಿ ವೇಳೆ ಮನೆಯಲ್ಲಿ ಯಾರು ಇಲ್ಲದ, ಮನೆಗೆ ಬೀಗ ಹಾಕಿರುವ ಮನೆಗಳ ಬಾಗಿಲನ್ನು ಹೊಡೆದು, ಚಿನ್ನಾಭರಣಗಳನ್ನು ಕಳುವು ಮಾಡುವ ಪ್ರವೃತ್ತಿಯುಳ್ಳವರಾಗಿದ್ದಾರೆಂದು ತಿಳಿದು ಬಂದಿದೆ. ಎಂದು ಮದ್ದೂರು ಪೊಲೀಸರ ಈ ಕಾರ್ಯಾಚರಣೆಯನ್ನು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್.ಯತೀಶ್ ಶ್ಲಾಘಿಸಿ, ಅಭಿನಂದಿಸಿದ್ಧಾರೆ.