ಮಂಡ್ಯ ತಾಲ್ಲೂಕಿನ ಹೊನಗಾನಹಳ್ಳಿ ಗೋಮಾಳ ತೆರವುಗೊಳಿಸಿ ರಸ್ತೆ ನಿರ್ಮಿಸಿ ಕೊಡುವಂತೆ ಒತ್ತಾಯಿಸಿ ರೈತರು ಗುರುವಾರ ಮಂಡ್ಯದಲ್ಲಿ ಆಹೋರಾತ್ರಿ ಪ್ರತಿಭಟನಾ ಧರಣಿ ಆರಂಭಿಸಿದರು.
ಕರ್ನಾಟಕ ರಾಜ್ಯ ರೈತಸಂಘದ ನೇತೃತ್ವದಲ್ಲಿ ನಗರದ ಮಂಡ್ಯ ತಾಲೂಕು ಕಚೇರಿ ಎದುರು ರೈತರು ಧರಣಿ ನಡೆಸಿದ ರೈತರು, ಹೊನಗಾನಹಳ್ಳಿ ಗ್ರಾಮದ ಸರ್ವೇ ನಂ.63 ರಲ್ಲಿ ಇರುವ ಗೋಮಾಳ ತೆರವು ಮಾಡಿ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳು ಎರಡು ಬಾರಿ ಆದೇಶ ಮಾಡಿದ್ದಾರೆ. ಆದರೆ ತಾಲೂಕು ಆಡಳಿತದ ಅಧಿಕಾರಿಗಳು ಗೋಮಾಳ ತೆರವು ಗೊಳಿಸಿ ರಸ್ತೆ ನಿರ್ಮಾಣ ಮಾಡಿಕೊಡದೇ ಇಲ್ಲಸಲ್ಲದ ನೆಪ ಹೇಳಿಕೊಂಡು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆಂದು ದೂರಿದರು.
ಈ ಹಿಂದೆ ಇದೇ ವಿಚಾರವಾಗಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಗೋಮಾಳ ತೆರವು ಮಾಡುವ ಆಶ್ವಾಸನೆ ನೀಡಿದ್ದ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ, ಕೂಡಲೇ ಹೊನಗಾನಹಳ್ಳಿ ಗ್ರಾಮದ ಸರ್ವೇ ನಂ.63 ರ ಗೋಮಾಳ ಮತ್ತು ಹುಲ್ಲೇನಹಳ್ಳಿ ಗ್ರಾಮದ ಸರ್ವೇ ನಂ.191 ರಲ್ಲಿ ಭೂ ಸ್ವಾಧೀನ ಮಾಲೀಕತ್ವವನ್ನು ರದ್ದುಪಡಿಸಬೇಕು, ಗೋಮಾಳ ತೆರವುಗೊಳಿಸಿ ತುರ್ತಾಗಿ ರಸ್ತೆ ನಿರ್ಮಿಸಿ ಕೊಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಜಿ.ಎಸ್.ಜಯರಾಮು ಗಾಣದಾಳು, ಆನಂದ್ ಕೊಮ್ಮೇರಹಳ್ಳಿ, ಕಾರ್ತಿಕ್ ಕೊಮ್ಮೇರಹಳ್ಳಿ, ರಾಣಿ ಹುಲ್ಲೇನಹಳ್ಳಿ, ಅಣ್ಣೆಗೌಡ ಜಿ ಮಲ್ಲಿಗೆರೆ ಹಾಗೂ ಜವರೇಗೌಡ ಗೋಪಾಲಪುರ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.