ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಲಘು ವಿಶ್ರಾಂತಿ ಪಡೆಯಲೆಂದು ಹೋಗಿದ್ದಾಗ ಸರ್ಕಾರಿ ಅತಿಥಿ ಗೃಹದ ಬಾಗಿಲು ಹಾಕಿದ್ದ ಘಟನೆ ಭಾನುವಾರ ನಡೆದಿದೆ. ಇದರಿಂದ ಹೆಚ್ಡಿಕೆ ಮುಜುಗರ ಅನುಭವಿಸಿದರು.
ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲು ಅವರು ಬಂದಿದ್ದರು. ಅತಿಥಿ ಗೃಹದಲ್ಲಿ ಕೊಂಚ ಸಮಯ ವಿಶ್ರಾಂತಿ ಪಡೆಯಲು ಬಯಸಿದ್ದರು. ಅಲ್ಲಿಗೆ ತೆರಳಿದಾಗ ಬೀಗ ಹಾಕಿರುವುದು ಕಂಡುಬಂತು. ಸ್ವಲ್ಪ ಹೊತ್ತು ಕಾದರೂ ಸಿಬ್ಬಂದಿ ಯಾರೂ ಬರಲಿಲ್ಲ. ಇದರಿಂದಾಗಿ ಅವರು ಅಲ್ಲಿಂದ ವಾಪಸಾದರು.
ಈ ಮೂಲಕ ಸರ್ಕಾರವು ಕೇಂದ್ರ ಸಚಿವರಿಗೆ ಅವಮಾನ ಮಾಡಿದೆ. ಪ್ರವಾಸ ಕಾರ್ಯಕ್ರಮದ ಪಟ್ಟಿಯನ್ನು ಮುಂಚಿತವಾಗಿಯೇ ಅಧಿಕಾರಿಗಳಿಗೆ ತಿಳಿಸಿದ್ದರೂ ಪೂರ್ವ ಸಿದ್ಧತೆಯನ್ನು ಮಾಡಿಕೊಂಡಿಲ್ಲ. ಶಿಷ್ಟಾಚಾರ ಪಾಲಿಸಿಲ್ಲ. ಅವರು ಅತಿಥಿ ಗೃಹದ ಬಳಿಗೆ ಬಂದಾಗಲೂ ಸರ್ಕಾರಿ ಅಧಿಕಾರಿಗಳ್ಯಾರೂ ಇರಲಿಲ್ಲ ಎಂದು ಜೆಡಿಎಸ್ ಮುಖಂಡರು ದೂರಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ‘ವಿಷಯ ಗಮನಕ್ಕೆ ಬಂದಿದ್ದು ಗಂಭೀರವಾಗಿ ಪರಿಗಣಿಸಿ ವಿಚಾರಣೆ ಮಾಡಲಾಗುತ್ತಿದೆ. ಕರ್ತವ್ಯ ಲೋಪದಡಿ ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಶಿಸ್ತುಕ್ರಮ ಜರುಗಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.