ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ.ಆರ್ಥಿಕ ಕಾರಣದಿಂದ ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಶಿಕ್ಷಣದಿಂದ ವಂಚಿತವಾಗಬಾರದು ಎಂಬುದು ನನ್ನ ಕಳಕಳಿಯಾಗಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳು ಜೊತೆ ಸದಾ ನಿಲ್ಲುತ್ತೇನೆ ಎಂದು ಸಮಾಜ ಸೇವಕ ಫೈಟರ್ ರವಿ ತಿಳಿಸಿದರು.
ನಾಗಮಂಗಲ ತಾಲೂಕಿನ ವಡೇರಪುರ ಶ್ರೀರಂಗನಾಥ ಪ್ರೌಢಶಾಲೆ, ಕೆಂಬಾರೆ ಸರ್ಕಾರಿ ಪ್ರೌಢಶಾಲೆ, ಹಟ್ನಾ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಅಲ್ಲಿನ ಕುಂದುಕೊರತೆಗಳನ್ನು ವಿದ್ಯಾರ್ಥಿಗಳಿಂದ ಆಲಿಸಿ ಅವರು ಮಾತನಾಡಿದರು.
ಆರ್ಥಿಕವಾಗಿ ದುರ್ಬಲವಾಗಿರುವ ವರ್ಗವನ್ನು ಶಿಕ್ಷಣದ ಮುನ್ನಲೆಗೆ ತರಬೇಕೆಂಬುದೇ ನನ್ನ ಆಶಯವಾಗಿದ್ದು, ಅಂತಹ ಯಾವುದೇ ಪ್ರತಿಭಾವಂತ ವಿದ್ಯಾರ್ಥಿಗಳು ಯಾವುದೇ ಅಂಜಿಕೆಯಿಲ್ಲದೇ ನನ್ನನ್ನು ಸಂಪರ್ಕಿಸಿ ಎಂದು ತಿಳಿಸಿದರು.
ಸಂವಾದದ ವೇಳೆ ವಿದ್ಯಾರ್ಥಿಗಳು ತಮ್ಮ ಶಾಲೆಗಳಿಗೆ ಬೇಕಾಗಿರುವ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಬೇಡಿಕೆ ಇಟ್ಟರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಮಾಜ ಸೇವಕ ಫೈಟರ್ ರವಿಯವರು, ವಡೇರಪುರ ಶ್ರೀರಂಗನಾಥ ಪ್ರೌಢಶಾಲೆ, ಕೆಂಬಾರೆ ಸರ್ಕಾರಿ ಪ್ರೌಢಶಾಲೆ, ಹಟ್ನ ಸರ್ಕಾರಿ ಶಾಲೆಗೆ ತಲಾ 25 ಸಾವಿರ ರೂ.ವೆಚ್ಚದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.
ರವಿ ಅವರ ಸೇವೆ ಶ್ಲಾಘನೀಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿ.ಜೆ.ಕುಮಾರ್ ಮಾತನಾಡಿ, ಹಣವುಳ್ಳ ಶ್ರೀಮಂತರು ತಾಲೂಕಿನಲ್ಲಿ ಅನೇಕ ಮಂದಿ ಇದ್ದರೂ ರವಿಯವರಂತೆ ತಮ್ಮ ಸ್ವಂತ ಹಣದಿಂದ ಸಮಾಜ ಸೇವೆ ಮಾಡಲು ಯಾರೂ ಮುಂದೆ ಬರುವುದಿಲ್ಲ. ಯಾವುದೇ ಫಲಾಪೇಕ್ಷೆ ಇಲ್ಲದೆ ತಾಲೂಕಿನಾದ್ಯಾಂತ ಬೇಡಿಕೆ ಇರುವ ಎಲ್ಲಾ ಗ್ರಾಮಗಳಿಗೂ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಿಸಿ ಕೊಟ್ಟಿರುವ ರವಿಯವರ ಸೇವೆ ಶ್ಲಾಘನೀಯ ಎಂದರು.
ಜನರ ಆರೋಗ್ಯದ ದೃಷ್ಠಿಯಿಂದ ಪ್ರತಿ ಹೋಬಳಿಯಲ್ಲೂ ಆರೋಗ್ಯ ಶಿಬಿರ ಏರ್ಪಡಿಸುವ ಮೂಲಕ ಕಡುಬಡವರಿಗೆ ನೆರವಾಗುತ್ತಿದ್ದಾರೆ. ದೇವಸ್ಥಾನಗಳ ಜೀರ್ಣೋದ್ದಾರ, ಶಾಲೆಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಶಿಕ್ಷಣ ಪ್ರೇಮಿಯಾಗಿ ಕೆಲಸ ಮಾಡುತ್ತಿದ್ದು, ತಾಲೂಕಿನ ಜನತೆ ಪೈಟರ್ ರವಿಯವರ ಸೇವೆಗಳನ್ನು ಉಪಯೋಗಿಸಕೊಳ್ಳಬೇಕು ಎಂದು ಮನವಿ ಮಾಡಿದರು.