ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆಯಿಂದಾಗಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸಂದರ್ಭದಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಎನ್.ಡಿ. ಆರ್.ಎ.ಎಫ್ ವತಿಯಿಂದ ಅಣಕು ಪ್ರದರ್ಶನವನ್ನು ಮೇ 27 ರಂದು ಪಾಂಡವಪುರ ತಾಲೂಕಿನ ಕೆರೆ ತೊಣ್ಣೂರು ಗ್ರಾಮದಲ್ಲಿ ಏರ್ಪಡಿಸಲಾಗಿದೆ ಎಂದು ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ ಅವರು ಕಾರ್ಯಕ್ರಮದಲ್ಲಿ ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದಿರುವ ಸಭೆಯಲ್ಲಿ ಮಾತನಾಡಿದ ಅವರು, ವಿಪತ್ತುಗಳು ಯಾವ ಸಮಯದಲ್ಲಿ ಬರುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಸಹ ವಿಪತ್ತು ನಿರ್ವಹಣೆಯ ಬಗ್ಗೆ ತಿಳಿದುಕೊಂಡರೆ ಪ್ರಾಣಾಪಾಯದಿಂದ ಪಾರಾಗಬಹುದು ಎಂದು ಅಣಕು ಪ್ರದರ್ಶನವನ್ನು ನಡೆಸುವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎನ್.ಡಿ.ಆರ್.ಎಫ್ ಇನ್ಸ್ಪೆಕ್ಟರ್ ವೇಲೂರು ರಮೇಶ್ ರವರು ಮಾತನಾಡಿ ವಿಪತ್ತುಗಳನ್ನು ಗುರುತಿಸಿ, ವಿಪತ್ತಿನಿಂದ ಉಂಟಾಗುವ ಹಾನಿಯನ್ನು ತಡೆಗಟ್ಟಲು ಅಗತ್ಯವಿರುವ ಸಲಕರಣೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ವಿಪತ್ತಿನ ಸಂದರ್ಭದಲ್ಲಿ ಅಧಿಕಾರಿಗಳು ಮೊದಲು ಕೈಗೊಳ್ಳಬೇಕಾದ ಎಚ್ಚರಿಕೆಗಳ ಬಗ್ಗೆ ವಿವರಿಸಿದರು.
ಪ್ರವಾಹದ ದೈಹಿಕ ಹಾನಿ, ಸಾವುನೋವುಗಳು, ಸಾರ್ವಜನಿಕರ ಆರೋಗ್ಯ, ಬೆಳೆ ನಾಶ ಮತ್ತು ಆಹಾರ ಪೂರೈಕೆ, ಕಾಳಜಿ ಕೇಂದ್ರ, ಮಾಧ್ಯಮ ಕೇಂದ್ರ, ರಕ್ಷಣೆ, ತುರ್ತು ಸೇವೆಗಳು, ಪುನರ್ವಸತಿ ಸೇರಿದಂತೆ ಇತರ ವ್ಯವಸ್ಥೆಗಳ ಬಗ್ಗೆ ಕೈಗೊಳ್ಳುವ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಸಭೆಯಲ್ಲಿ ಅಗ್ನಿ ಶಾಮಕ ದಳದ ಡಿ.ಎಫ್.ಒ ಗುರುರಾಜ್, ಜಿಲ್ಲಾಧಿಕಾರಿಗಳ ಕಚೇರಿಯ ಹಿರಿಯ ಸಹಾಯಕರಾದ ಸ್ವಾಮಿಗೌಡ ಕೆ.ಎಂ, ಅಪಾರ ಪೊಲೀಸ್ ವರಿಷ್ಟಾಧಿಕಾರಿ ವೇಣುಗೋಪಾಲ್, ಪಾಂಡವಪುರ ತಹಶಿಲ್ದಾರ್ ನಯನ, ಜಿಲ್ಲಾ ರೋಗವಾಹಕ ಆಶ್ರಿತರೋಗಗಳ ನಿಯಂತ್ರಣಾಧಿಕಾರಿ ಡಾ.ಕೆ.ಜಿ.ಭವಾನಿಶಂಕರ್, ಎನ್.ಡಿ.ಆರ್.ಎಫ್ ಸಂಯೋಜಕ ಕುಮಾರ್,, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಮಂಜುನಾಥ್ ಹಾಗೂ ಇತರರಿದ್ದರು.