ಮಂಡ್ಯ ಜಿಲ್ಲೆಯಲ್ಲಿ ಸಾರ್ವಜನಿಕರಿಂದ ಬಂದಂತಹ 75 ಕುಂದುಕೊರತೆ ಅರ್ಜಿಗಳನ್ನು ಈಗಾಗಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ರವಾನೆ ಮಾಡಲಾಗಿದ್ದು, ಅರ್ಜಿಗಳ ಬಗ್ಗೆ ಚರ್ಚೆ ನಡೆಸಿ ಶೀಘ್ರ ಪರಿಹಾರ ನೀಡಲು ಪ್ರಯತ್ನಿಸುತ್ತೇವೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಧಿಕಾರಿಗಳು ಈ ಅರ್ಜಿಗಳಗೆ ಸಂಬಂಧಪಟ್ಟ ದೂರುದಾರರಿಗೆ ಪರಿಹಾರ ನೀಡಿ,ಲೋಕಾಯುಕ್ತ ಸಂಸ್ಥೆಗೆ ಒಂದು ತಿಂಗಳೊಳಗೆ ವರದಿಯನ್ನು ಸಲ್ಲಿಸಬೇಕು. ಪರಿಹಾರ ನೀಡಿದಂತಹ ಪ್ರಕರಣಗಳನ್ನು ಅಲ್ಲಿಯೇ ಮುಕ್ತಾಯ ಗೊಳಿಸುತ್ತೇವೆ ಎಂದರು.
ಲೋಕಾಯುಕ್ತ ಕಚೇರಿಗೆ ದಾಖಲಾಗಿದ್ದ 84 ಪ್ರಕರಣಗಳ ವಿಚಾರಣೆಯನ್ನು ಇಂದು ನಡೆಸಲಾಯಿತು. ಒಂದೊಂದು ಪ್ರಕರಣಗಳನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಲಾಗಿದ್ದು, ಸುಮಾರು 35 ಪ್ರಕರಣಗಳು ಪರಿಹಾರಕ್ಕೆ ತೀರ್ಮಾನವಾಗಿದೆ ಎಂದರು.
ನೋಟಿಸ್ ಜಾರಿ ಮಾಡಿದಂತಹ ಅಧಿಕಾರಿಗಳು ಕೆಲವು ಪ್ರಕರಣಗಳಲ್ಲಿ ದೂರುದಾರರಿಗೆ ಪರಿಹಾರವನ್ನು ಸಹ ನೀಡಿದ್ದಾರೆ.ಇದು ಒಂದು ಹೊಸ ಆಯಾಮವನ್ನು ಸೃಷ್ಟಿ ಮಾಡಿದೆ ಎಂದರೆ ತಪ್ಪಾಗಲಾರದು.ಕಳೆದ ಎರಡು ದಿನಗಳ ಕಾಲ ಮಂಡ್ಯ ಜಿಲ್ಲೆಯಲ್ಲಿ ನಡೆದ ಪ್ರಕ್ರಿಯೆಯಲ್ಲಿ ಜನರು ಲೋಕಾಯುಕ್ತರ ಮೇಲೆ ಇಟ್ಟಿರುವ ವಿಶ್ವಾಸ ಬಹಳ ಸಂತೋಷದ ಸಂಗತಿ ಎಂದರು.
ಪ್ರವಾಸದ ವೇಳೆ ಕೆಲವು ಗ್ರಾಮ ಪಂಚಾಯಿತಿಗಳಿಗೂ ಸಹ ಭೇಟಿ ನೀಡಿ ಪರಿಶೀಲನೆ ಮಾಡಲಾಯಿತು. ಗ್ರಾಮ ಪಂಚಾಯಿತಿಗಳನ್ನು ಬಹಳ ಉತ್ಕೃಷ್ಟ ಮಟ್ಟದಲ್ಲಿ ಅಭಿವೃದ್ಧಿ ಪಡಿಸಿದ್ದಾರೆ. ಹನಕೆರೆ ಗ್ರಾಮದಲ್ಲಿ ವನ ಮಹೋತ್ಸವ ಉದ್ಘಾಟಿಸಿ ಗಿಡಗಳನ್ನು ನೆಟ್ಟಿದ್ದು ಸಂತಸ ತಂದಿದೆ ಎಂದರು.