ಗ್ರಾಮೀಣ ಕಾಲೇಜು ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದರೆ, ರಾಜ್ಯ ಹಾಗೂ ರಾಷ್ಟ ಹಾಗೂ ಅಂತರಾಷ್ಟಿಯ ಮಟ್ಟದಲ್ಲಿ ಬೆಳೆಯಬಹುದಾಗಿದೆ, ಇಂತಹ ಕ್ರೀಡಾ ಚಟುವಟಿಕೆಗಳು ಸಾಧನೆಗೆ ಪೂರಕವಾಗಿವೆ ಎಂದು ಮಂಡ್ಯ ಜಿಲ್ಲಾ ಬಿಜೆಪಿ ಮುಖಂಡ ಡಾ.ಸಿದ್ದರಾಮಯ್ಯ ಮಾತನಾಡಿದರು.
ನಗರದಲ್ಲಿರುವ ಪಿ.ಇ.ಟಿ ಕ್ರೀಡಾಂಗಣದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ರೈತರ ಶಿಕ್ಷಣ ಸಂಸ್ಥೆಯ ಸಂಯುಕ್ತ ಪದವಿ ಪೂರ್ವ ಕಾಲೇಜು, ಹನಕೆರೆ, ಇವರು ಆಯೋಜಿಸಿದ್ದ 2 ದಿನಗಳ ತಾಲ್ಲೂಕು ಮಟ್ಪದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿನ ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರೀಡಾ ಕ್ಷೇತ್ರದಲ್ಲಿನ ಸಾಧನೆ ಅತ್ಯವಶ್ಯಕ, ಆದರೆ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರೀಡೆಯನ್ನು 2ನೇ ಆದ್ಯತೆಯಾಗಿ ಪರಿಗಣಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಚ್.ಪಿ. ಮಹೇಶ್ ಮಾತನಾಡಿ, ಗ್ರಾಮೀಣ ವ್ಯಾಪ್ತಿಯ ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಹನಕೆರೆಯಲ್ಲಿ ರೈತರ ಶಿಕ್ಷಣ ಸಂಸ್ಥೆ ಆರಂಭಿಸಲಾಗಿದೆ ಎಂದರು.
ಸಹೋದರ ಎಚ್.ಪಿ.ನಾಗೇಂದ್ರ ಅವರ ಜನ್ಮದಿನ ಇಂದು, ಅದರ ಪ್ರಯುಕ್ತ ನಮ್ಮ ಸಂಸ್ಥೆಯಿಂದ ಶಿಕ್ಷಣ ಇಲಾಖೆಯ ಮಾರ್ಗದರ್ಶನದಲ್ಲಿ ತಾಲ್ಲೂಕು ಕ್ರೀಡಾಕೂಟ ಆಯೋಜಿಸಿದ್ದೇವೆ, ವಿದ್ಯಾರ್ಥಿಗಳ ಉದ್ಯೋಗಕ್ಕಾಗಿ ಕ್ರೀಡಾ ಕ್ಷೇತ್ರದ ಸಾಧನೆಯ ಪ್ರಮಾಣಪತ್ರ ನೆರವಾಗುತ್ತವೆ ಎಂದು ನುಡಿದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ. ಮಂಜುನಾಥ ಪ್ರಸನ್ನ ಮಾತನಾಡಿ, ತಾಲ್ಲೂಕು ಕ್ರೀಡಾಕೂಟದಲ್ಲಿ 36 ಕಾಲೇಜುಗಳ ಸುಮಾರು 2 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ರೈತರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಎಚ್.ಡಿ.ರಾಜಣ್ಣ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಮ್, ಹಾಪ್ ಕಾಮ್ಸ್ ನಿರ್ದೇಶಕ ಹೊಸಹಳ್ಳಿ ನಾಗೇಶ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ದೇಶಕ ಎಸ್. ಟಿ.ಜವರೇಗೌಡ, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಡಿ.ನಾಗರಾಜು, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಜಿ.ಎನ್. ನಾಗೇಶ್ ಉಪಸ್ಥಿತರಿದ್ದರು.
ಬಿಜೆಪಿ ಮುಖಂಡರಾದ ಅಂಕಪ್ಪ, ವಿವೇಕ್, ರಮೇಶ್, ರೈತರ ಶಿಕ್ಷಣ ಸಂಸ್ಥೆ ನಿರ್ದೇಶಕ ಹನಕೆರೆ ಎಚ್. ಪಿ.ಶಶಿಕುಮಾರ್, ಪ್ರಾಂಶುಪಾಲ ಎಚ್.ಎನ್.ಶಿವಪ್ಪ, ಮುಖ್ಯ ಶಿಕ್ಷಕ ಆರ್.ಡಿ.ಕೃಷ್ಣ, ಕ್ರೀಡಾ ಸಂಯೋಜಕ ಎ.ಎಂ.ವಿಜಯ್ ಕುಮಾರ್, ಕ್ರೀಡಾ ಸಂಚಾಲಕ ಕೆ. ಜಯರಾಮ್ ಸೇರಿದಂತೆ ಹಲವರು ಹಾಜರಿದ್ದರು.