ರೈತರಲ್ಲಿ ನೀರಿನ ಮಿತಬಳಕೆ ಅನುವಾಗುವ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತುಂತುರು ಹಾಗೂ ಹನಿ ನೋರವಾರಿ ಒದಗಿಸಲು ಸಹಾಯಧನವನ್ನು ಒದಗಿಸಲಾಗುವುದು. ರೈತರು ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಹೆಚ್.ಎನ್.ಗೋಪಾಲಕೃಷ್ಣ ಸಲಹೆ ನೀಡಿದರು.
ಮಂಗಳವಾರ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆಯ ಸಭೆ ನಡೆಸಿ ಮಾತನಾಡಿದರು. ಹನಿ ನೀರಾವರಿ ಹಾಗೂ ತುಂತುರು ನೀರಾವರಿಗೆ ರೈತರಿಂದ ಹೆಚ್ಚಿನ ಬೇಡಿಕೆ ಇದ್ದಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
2021-22 ನೇ ಸಾಲಿನಲ್ಲಿ ಸೂಕ್ಷ್ಮ ನೀರಾವರಿ ಯೋಜನೆಯಡಿ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಮೂಲಕ ಒಟ್ಟು 9,204 ಹೆಕ್ಟೇರ್ ಪ್ರದೇಶಗಳಿಗೆ ₹ 2,233 ಲಕ್ಷ ರೂ ಸಹಾಯಧನ ನೀಡಲಾಗಿದೆ ಎಂದರು.
2022-23 ನೇ ಸಾಲಿನಲ್ಲಿ ಸೂಕ್ಷ್ಮ ನೀರಾವರಿ ಯೋಜನೆಯಡಿ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಮೂಲಕ ಅನುಷ್ಟಾನಗೊಳಿಸಲು ಒಟ್ಟು 6,101 ಹೆಕ್ಟೇರ್ ಪ್ರದೇಶಗಳಿಗೆ ₹ 2,423.57 ಲಕ್ಷ ರೂ ಸಹಾಯಧನದ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲು ಜಿಲ್ಲಾಧಿಕಾರಿ ಅನುಮೋದನೆ ನೀಡಿದರು.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕಳೆದ ಮೂರು ವರ್ಗಗಳಲ್ಲಿ ಎಲ್ಲಾ ಹಂಗಾಮುಗಳಲ್ಲಿ 55571 ರೈತರು 47286 ಎಕರೆ ಪ್ರದೇಶದ ಬೆಳೆಗಳಿಗೆ ವಿಮೆ ಮಾಡಿಸಿದ್ದು, ರೂ 137.6 ಲಕ್ಷ ಪ್ರೀಮಿಯಂ ಪಾವತಿಗೆ ರೂ 2146 ಲಕ್ಷ ಮೊತ್ತದ ವಿಮೆ ಪರಿಹಾರ ಪಡೆದುಕೊಂಡಿರುತ್ತಾರೆ ಎಂದರು.
2022-23 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 30,998 ಸಂಖ್ಯೆಯ ರೈತರು 66.17 ಲಕ್ಷ ಮೊತ್ತದ ವಿಮೆ ಪಾವತಿಸಿದ್ದು 26,129 ಎಕರೆ ಪ್ರದೇಶದ ಬೆಳೆಗಳಿಗೆ ವಿಮೆ ನೊಂದಣಿ ಮಾಡಲಾಗಿದೆ. ಹಿಂಗಾರು ಹಂಗಾಮುಗಳಲ್ಲಿ 4,461 ರೈತರು 9.39 ಲಕ್ಷ ₹ ಮೊತ್ತದ ವಿಮೆ ಪಾವತಿಸಿದ್ದು, 5,006 ಎಕರೆ ಪ್ರದೇಶದ ಬೆಳೆಗಳಿಗೆ ವಿಮೆ ನೊಂದಾಯಿಸಲಾಗಿದೆ. ಬೆಳೆ ವಿಮೆ ರೈತರಿಗೆ ಹೆಚ್ಚು ಉಪಯುಕ್ತವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ನೊಂದಾಯಿಸಿಕೊಳ್ಳುವಂತೆ ಅಧಿಕಾರಿಗಳು ಪ್ರೆರೇಪಿಸಬೇಕು ಎಂದರು.
”ಒಂದು ಜಿಲ್ಲೆ ಒಂದು ಉತ್ಪನ್ನ” ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆ ಸಂಬಂಧ 147 ಅರ್ಜಿಗಳು ಸ್ವೀಕೃತವಾಗಿದ್ದು, 88 ಜನರಿಗೆ ಸಾಲ ಮಂಜೂರಾಗಿದೆ, ಮಂಡ್ಯ ಜಿಲ್ಲೆಯಲ್ಲಿ ಬೆಲ್ಲಕ್ಕೆ ಒಳ್ಳೆಯ ಬೇಡಿಕೆ ಬರುವಂತೆ ಮಾಡಬೇಕು, ಇದಕ್ಕಾಗಿ ಒಂದು ಬ್ರಾಂಡ್ ಮಾಡಬೇಕು. ಈ ಬಗ್ಗೆ ಚಿಂತಿಸಿ ಈಗಾಗಲೇ ಸಾಲ ಮಂಜೂರು ಮಾಡಿರುವವರನ್ನು ತೊಡಗಿಸಿಕೊಳ್ಳಿ ಎಂದರು.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ವಿ.ಎಸ್.ಅಶೋಕ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಡಿ.ಮಂಜುನಾಥ್, ಕೃಷಿ ಇಲಾಖೆಯ ಉಪ ವಿಭಾಗ ನಿರ್ದೇಶಕರಾದ ಮಾಲತಿ, ಪಾಂಡವಪುರ ಕೃಷಿ ಇಲಾಖೆಯ ಉಪ ವಿಭಾಗ ಉಪನಿರ್ದೇಶಕರಾದ ಮಮತ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸೌಮ್ಯಶ್ರೀ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಶಿವಮ್ಮ, ಜಿ.ಪಂ. ಯೋಜನಾಧಿಕಾರಿ ಸುಬ್ರಹ್ಮಣ್ಯ, ಲೀಡ್ ಬ್ಯಾಂಕ್ ಮ್ಯಾನೇಜರ್ ದೀಪಕ್, ರೇಷ್ಮೆ ಇಲಾಖೆಯ ಅಧಿಕಾರಿ ರಾಚಪ್ಪ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.