‘ಸ್ವಾಭಿಮಾನಿ ಎನ್ನುವ ಪದ ಬಳಕೆ ಮಾಡಬೇಡಿ, ಸ್ವಾಭಿಮಾನಕ್ಕೂ ನಿಮಗೂ ಏನು ಸಂಬಂಧ ? ನಿಮ್ಮನ್ನು ನಂಬಿ ಬೆಂಬಲಿಸಿದವರ ಕಥೆ ಏನು ? ದಯವಿಟ್ಟು ನನ್ನ ಅಣ್ಣ(ಅಂಬರೀಶ್)ನ ಮರ್ಯಾದೆ ಕಳೆಯಲು ಹೋಗಬೇಡಿ’ ಎಂದು ಇತ್ತೀಚೆಗೆ ಬಿಜೆಪಿ ಸೇರಿದ ಸಂಸದೆ ಸುಮಲತಾ ವಿರುದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹೆಚ್.ಎನ್.ರವೀಂದ್ರ ಕಿಡಿಕಾರಿದ್ದಾರೆ.
ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ನಿಮ್ಮನ್ನು ಗೆಲ್ಲಿಸಿದ ಕಾಂಗ್ರೆಸ್ ಮುಖಂಡರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ದರ್ಶನ್ ಪುಟ್ಟಣ್ಣಯ್ಯ, ರಮೇಶ್ ಬಾಬು ಬಂಡಿಸಿದ್ದೇಗೌಡ, ಕೆ.ಬಿ.ಚಂದ್ರಶೇಖರ್ ಅವರಿಗೆ ಯಾವ ಉತ್ತರವನ್ನು ನೀಡುತ್ತೀರಿ? ನಿಮಗಾಗಿ ನಾನು 249 ಕಿ.ಮೀ ಪಾದಯಾತ್ರೆ ಮಾಡಿದ್ದೆ. ನನ್ನಂತವರಿಗೆ ನೀವು ನೀಡುವ ಉತ್ತರವೇನು ?
ಮಂಡ್ಯದ ಸ್ವಾಭಿಮಾನವನ್ನು ಬಿಜೆಪಿಗೆ ಅಡವಿಟ್ಟಿದ್ದು ಏಕೆ ? ಈ ಬಗ್ಗೆ ನೀವು ಉತ್ತರ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಇಂತಹ ಹಲವು ವಿಚಾರಗಳನ್ನು ಜನರ ಮುಂದೆ ಇಡಬೇಕಾಗುತ್ತದೆ ಎಂದು ರವೀಂದ್ರ ತಿಳಿಸಿದ್ದಾರೆ.