ಮಳವಳ್ಳಿ ತಾಲೂಕಿನ ಕೆರೆ ಕಟ್ಟೆಗಳಿಗೆ ನೀರು ಬಿಡದಿರುವ ಸರ್ಕಾರ ಹಾಗೂ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಗಮನದ ವೇಳೆ ಪ್ರತಿಭಟನೆ ನಡೆಸಲು ಮುಂದಾಗಿದ್ದ ಮಾಜಿ ಶಾಸಕ ಡಾ ಕೆ ಅನ್ನದಾನಿ ನೇತೃತ್ವದ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ ಪ್ರಸಂಗ ಶನಿವಾರ ಸಾಯಂಕಾಲ ಪಟ್ಟಣದಲ್ಲಿ ಜರುಗಿತು .
ಕಳೆದ ಒಂದು ವಾರದ ಹಿಂದೆಯೇ ತಾಲೂಕಿನ ಕೆರೆಕಟ್ಟೆಗಳಿಗೆ ನೀರು ತುಂಬಿಸದಿದ್ದರೆ ಮುಖ್ಯಮಂತ್ರಿಗಳ ಆಗಮನದ ವೇಳೆ ಕಪ್ಪು ಬಾವುಟ ಪ್ರದರ್ಶಿಸುವದಾಗಿ ಮಾಜಿ ಶಾಸಕ ಅನ್ನದಾನಿ ಘೋಷಿಸಿದ್ದರು. ಅದರಂತೆ ಮಳವಳ್ಳಿ ಪಟ್ಟಣದ ಪೇಟೆ ವೃತ್ತದಲ್ಲಿ ಪ್ರತಿಭಟನೆ ನಡೆಯುವ ಸುಳಿವು ಹರಿತ ಪೊಲೀಸರು ವೃತ್ತದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ ಭದ್ರತೆಯ ಕೋಟೆಯನ್ನು ನಿರ್ಮಿಸಿದ್ದರು.
ಸಾಯಂಕಾಲ ನಾಲ್ಕು ಮೂವತ್ತರ ಸುಮಾರಿಗೆ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರೊಡಗೂಡಿ ಮಳವಳ್ಳಿ ಪೇಟೆ ವೃತ್ತಕ್ಕೆ ಆಗಮಿಸಿದ ಅನ್ನದಾನಿ, ಸರ್ಕಾರ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ತಾಲೂಕಿನ ಕೆರೆಕಟ್ಟೆಗಳು ನೀರಿಲ್ಲದೆ ಒಣಗುತ್ತಿದ್ದು ಕೃಷಿ ಚಟುವಟಿಕೆಗೆ ಸಹ ನೀರಿಲ್ಲದೆ, ರೈತರು ಪರಿಸರ ನಾಲೆಗಳಿಗೆ ನೀರು ಹರಿಸದೆ, ಜಲಪಾತೋತ್ಸವದ ಹೆಸರಿನಲ್ಲಿ ಮೋಜು ಮಸ್ತಿಗೆ ಜಿಲ್ಲಾಡಳಿತ ಅವಕಾಶ ನೀಡಿದೆ ಎಂದು ಕಿಡಿಕಾರಿದರು. ನಂತರ ಪೊಲೀಸರು ಮಾಜಿ ಶಾಸಕ ಸೇರಿದಂತೆ ಎಲ್ಲ ಪ್ರತಿಭಟನಾಕಾ ರರನ್ನು ಬಂಧಿಸಿ ಬಸ್ಸುಗಳಲ್ಲಿ ತುಂಬಿ ಕರೆದೊಯ್ದರು.
ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ರವಿ, ತಾಲೂಕು ಅಧ್ಯಕ್ಷ ಶ್ರೀಧರ್. ತಾಲೂಕು ಬಿಜೆಪಿ ಅಧ್ಯಕ್ಷ ಕೃಷ್ಣ, ಪುರಸಭಾ ಉಪಾಧ್ಯಕ್ಷ ಜಯಸಿಂಹ, ಸದಸ್ಯ ರವಿ ಮುಖಂಡರಾದ ಪ್ರಭು, ಭುವಳ್ಳಿ ಸದಾ ಕಂಬರಾಜು ಹಾಜರಿದ್ದರು.